ಬೆಂಗಳೂರು: ಕರ್ನಾಟಕದಲ್ಲಿ 2007ರಿಂದ ಲಾಟರಿ ನಿಷೇಧವಿದ್ದರೂ ಅಕ್ರಮ, ಆನ್ಲೈನ್ ಲಾಟರಿಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಇದರಿಂದ ಕರ್ನಾಟಕವು ವಾರ್ಷಿಕವಾಗಿ 6000 ಕೋಟಿ ರೂಗಳ ಆದಾಯ ನಷ್ಟವನ್ನು ಅನುಭವಿಸುತ್ತಿವೆ ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಅಧ್ಯಕ್ಷರಾದ ಸಿ.ರಾಮಕೃಷ್ಣ ಹೇಳಿದರು.
ಇಂದು ಬೆಂಗಳೂರಿನ ಪ್ರೆಸ್ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಕದ ಕೇರಳ ರಾಜ್ಯ ಸರ್ಕಾರವು ಲಾಟರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಉಸ್ತುವಾರಿ ಮತ್ತು ನಿರ್ವಹಣೆಯ ಮೂಲಕ ಪ್ರತಿವರ್ಷ 6-7 ಸಾವಿರ ಕೋಟಿ ರೂ ಲಾಭ ಮಾಡುತ್ತಿದೆ. ಕೇರಳ ರಾಜ್ಯ ಸರ್ಕಾರ ಅನುಸರಿಸುತ್ತಿರುವ ಇದೇ ಮಾದರಿಯನ್ನು ಅನುಸರಿಸಿ ಲಾಟರಿ ಯೋಜನೆಯನ್ನು 2023- 24ನೇ ಸಾಲಿನ ಬಜೆಟ್ನಲ್ಲಿ ಕರ್ನಾಟಕ ಸರ್ಕಾರದ ಲಾಟರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.
ಕೇರಳ ರಾಜ್ಯ ಸರ್ಕಾರದ ಮಾದರಿಯನ್ನು ಅನುಸರಿಸಿ ಗಳಿಸಿದ ಹೆಚ್ಚುವರಿ ಆದಾಯದಿಂದ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡು ದುರ್ಬಲ ವರ್ಗಗಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ಒದಗಿಸಲು ಸರ್ಕಾರಕ್ಕೆ ಸಹಾಯವಾಗಲಿದೆ. ಅಲ್ಲದೆ ಅಕ್ರಮ ಹಾಗೂ ಆನ್ಲೈನ್ ಇನ್ನಿತರ ಅಧಿಕೃತ ಲಾಟರಿ ವ್ಯವಹಾರಗಳನ್ನು ನಿಲ್ಲಿಸಲು ಸಹಾಯವಾಗಲಿದೆ ಎಂದು ಹೇಳಿದರು.
ಇ- ಲಾಟರಿ ಹಾಗೂ ಆನ್ಲೈನ್ ಗ್ಯಾಂಬ್ಲಿಂಗ್ ಯುಗದಲ್ಲಿ ಕರ್ನಾಟಕದ ಲಾಟರಿ ನಿಷೇಧ ಕಾಯಿದೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಅಲ್ಲದೆ ಇತರ ರಾಜ್ಯಗಳ ಲಾಟರಿಗಳು ಮತ್ತು ಇ- ಲಾಟರಿಗಳು ಹುಲುಸಾಗಿ ಅಭಿವೃದ್ಧಿ ಹೊಂದುತ್ತಿರುವಾಗ ನಮ್ಮ ರಾಜ್ಯದಲ್ಲಿ ನಿಷೇಧಿಸಿರುವುದರಲ್ಲಿ ಅರ್ಥವಿಲ್ಲ. ಈ ಲಾಟರಿ ಯೋಜನೆ ಸರ್ಕಾರಕ್ಕೆ ಹೊರೆಯಾಗದ ರೀತಿಯಲ್ಲಿ ಖರ್ಚುವೆಚ್ಚಗಳನ್ನು ನಿರ್ವಹಿಸಲಾಗುವುದು. ಮುದ್ರಿತವಾದ ಎಲ್ಲಾ ಟಿಕೇಟುಗಳನ್ನು ಮುಖ್ಯ ದಾಸ್ತಾನುದಾರರು ಎಲ್ಲಾ ಟಿಕೇಟುಗಳ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಿ ಮುದ್ರಿತವಾದ ಟಿಕೇಟುಗಳನ್ನು ಪಡೆಯುವುದು. ಉಳಿದ ಟಿಕೇಟುಗಳನ್ನು ಎಂ.ಎಸ್.ಐ.ಎಲ್. ಗೆ ಹಿಂದಿರುಗಿಸುವ ಪದ್ಧತಿ ಇರುವುದಿಲ್ಲ. ಟಿಕೇಟುಗಳ ಮುದ್ರಣಕ್ಕೆ ತಗಲುವ ವೆಚ್ಚವನ್ನು ಮುಖ್ಯ ದಾಸ್ತಾನುದಾರರು ಪಾವತಿ ಮಾಡಬೇಕಾಗುತ್ತದೆ. ಅದೂ ಸರ್ಕಾರದ ಅಧಿಕೃತ ಆದೇಶದಂತೆ. ಜಾಹೀರಾತು ಮತ್ತು ವಿವಿಧ ರೀತಿಯ ಪ್ರಚಾರಕ್ಕಾಗಿ ಮುಖ್ಯ ದಾಸ್ತಾನುದಾರರು ಆ ಖರ್ಚುವೆಚ್ಚಗಳನ್ನು ನಿರ್ವಹಣೆ ಮಾಡುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎ.ಮೈಕೆಲ್ ರಾಜ್, ಕಾರ್ಯದರ್ಶಿಗಳಾದ ಪದ್ಮಜಿ ರಾವ್, ಖಜಾಂಚಿಗಳಾದ ಪಿ. ಸ್ವಾಮಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಆರ್ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು.