ಕಾರವಾರ: ಪಕ್ಷ ಯಾವ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ವಹಿಸುತ್ತದೆಯೋ ಅದನ್ನು ನಿಷ್ಠೆಯಿಂದ ಮಾಡುತ್ತಾರೆ. ಹೀಗಿರುವಾಗ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಬಿಜೆಪಿ ನಾಯಕರು, ಕಾರ್ಯಕರ್ತರು ತಮಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿರುವ ಪಕ್ಷ. ಪಕ್ಷದ ಕಾರ್ಯಕರ್ತರು ಅಷ್ಟೇ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದರು.
ಅಸ್ನೋಟಿಕರ್ ಅವರು ಚುನಾವಣೆ ಎದುರಿಸುವವರು ಅವರ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಬೇಕು ಅದು ಬಿಟ್ಟು ಇಂತಹ ಹೇಳಿಕೆ ನೀಡಿ ಕಾರ್ಯಕರ್ತರ ಮಧ್ಯೆ ಗೊಂದಲ ಸೃಷ್ಟಿ ಮಾಡಬಾರದು ಎಂದರು.
ಪಕ್ಷದ ನಾಯಕರು, ಕಾರ್ಯಕರ್ತರು, ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಟೀಕೆ ಮಾಡಲಿ ಆದರೆ, ಬಿಜೆಪಿ ಸಂಸದರ ಆಶೀರ್ವಾದ ತಮಗಿದೆ, ಬಿಜೆಪಿ ಕಾರ್ಯಕರ್ತರು ತಮ್ಮ ಹಿಂದೆ ಬರುತ್ತಾರೆ ಎನ್ನುವುದು ಸುದ್ಧ ಸುಳ್ಳು, ಹಲವಾರು ನಾಯಕರ ಆದರ್ಶ ಬಿಜೆಪಿ ಪಕ್ಷಕ್ಕಿದೆ. ಇಂತಹ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ. ಯಾರನ್ನೋ ಬೆಂಬಲಿಸಲು ನಾವು ದಡ್ಡರಲ್ಲ ಎಂದು ತಿರುಗೇಟು ನೀಡಿದರು.
ಜೆಡಿಎಸ್, ಕಾಂಗ್ರೆಸ್ನಲ್ಲಿ ಎ ಮತ್ತು ಬಿ ತಂಡಗಳು ಇವೆ. ಆದರೆ, ಬಿಜೆಪಿಯಲ್ಲಿ ಆ ರೀತಿ ಗುಂಪುಗಳು ಇಲ್ಲ. ಒಂದು ಕುಟುಂಬದಲ್ಲಿ ಹೇಗೆ ಸಣ್ಣಪುಟ್ಟ ಅಸಮಾಧಾನಗಳು ಇರುತ್ತವೆಯೋ ಹಾಗೆಯೇ ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನಗಳು ಇದ್ದೇ ಇರುತ್ತವೆ ಎಂದು ಅವರು ತಿಳಿಸಿದರು.