ಹೊನ್ನಾವರ: ಬಾಡಿಗೆ ನೆಪದಲ್ಲಿ ಕಾರನ್ನು ತೆಗೆದುಕೊಂಡು ಹೋಗಿ ಚಾಕು ತೋರಿಸಿ ಬೆದರಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ರೇವಣಸಿದ್ದೇಶ್ವರ ಕಾಲೋನಿಯ ಸಂಗಮೇಶ ಶಿವಶರಣಪ್ಪ ಅಳ್ಳಗಿ(25), ಚೌದರಿಓಣಿಯ ಸಂತೋಷ ಶಿವಶರಣಪ್ಪ ಭಜಂತ್ರಿ (24) ಮಾಶಾಳದ ಶ್ರವಣಕುಮಾರ ಶಂಕರಪ್ಪ ಕಲ್ಲೋಳ್ಳ (22) ಬಂಧಿತರಾಗಿದ್ದು, ಹೊನ್ನಾವರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆ. 20 ಮಂಗಳೂರಿನ ಟ್ಯಾಕ್ಸಿ ಸ್ಟ್ಯಾಂಡನಲ್ಲಿ ಬಾಡಿಗೆಗಾಗಿ ನಿಲ್ಲಸಿಟ್ಟ ಕಾರಿನ ಬಳಿಗೆ ತೆರಳಿದ ಆರೋಪಿತರು ಬಾಡಿಗೆ ಬರಲು ಕೇಳಿದ್ದು, ಸುಬ್ರಮಣ್ಯಕ್ಕೆ ಹೋಗಲು ಬಾಡಿಗೆ ಮಾಡಿಕೊಂಡು ಬಂದವರು.
ಸುಬ್ರಮಣ್ಯಕ್ಕೆ ಹೋಗದೆ ಚಾಲಕನಿಗೆ ಮುರ್ಡೇಶ್ವರಕ್ಕೆ ಕಾರನ್ನು ಒಯ್ಯಲು ತಿಳಸಿದಾಗ, ಚಾಲಕ ಕಾರನ್ನು ಮುರುಡೇಶ್ವರಕ್ಕೆ ತಂದಿದ್ದಾನೆ. ಈ ವೇಳೆ ಹೈವೆ ಬಳಿಯ ಮುರುಡೇಶ್ವರ ದ್ವಾರದ ಹತ್ತಿರ ಬಂದಾಗ, ಬಂಧಿತರು ಮುರ್ಡೇಶ್ವರಕ್ಕೆ ಹೋಗುವದು ಬೇಡಾ ಮುಂದೆ ಕರೆದುಕೊಂಡು ಹೋಗು ಎಂದು ಹೇಳಿದ್ದಾರೆ. ಕಾರಿನ ಚಾಲಕ ಮುರುಡೇಶ್ವರ ಕಡೆಯಿಂದ ಹೊನ್ನಾವರದ ಕಡೆಗೆ ಹೋಗುತ್ತಿರುವಾಗ ಮೂತ್ರ ವಿಸರ್ಜನೆಯ ಸಲುವಾಗಿ ಕಾರನ್ನು ಪಕ್ಕದಲ್ಲಿ ನಿಲ್ಲಿಸಲು ಸೂಚಿಸಿದ್ದಾರೆ.
ಕಾರನ್ನು ನಿಲ್ಲಿಸಿದ ತಕ್ಷಣ ಆರೋಪಿತರು ಕಾರನ್ನು ದೋಚುವ ಉದ್ದೇಶದಿಂದ ಆರೋಪಿತ ಸಂಗಮೇಶ ಕಿಸೆಯಲ್ಲಿದ್ದ ಚಾಕುವನ್ನು ತೆಗೆದು ಚಾಲಕನ ಕುತ್ತಿಗೆಯ ಹತ್ತಿರ ಹಿಡಿದು ಇಳಿಯಲು ಹೇಳಿದ್ದಾರೆ. ಕಾರಿನಿಂದ ಇಳಿಯದಿದ್ದಾಗ ಪಿರ್ಯಾದಿಗೆ ಆರೋಪಿತರು ಒಟ್ಟಾಗಿ ಕಾರಿನಿಂದ ದೂಡಿ ಹಾಕಲು ಪ್ರಯತ್ನಿಸುತ್ತಿರುವಾಗ ಚಾಲಕನ ಕೂಗನ್ನು ಕೇಳಿದ ಸಾರ್ವಜನಿಕರು ಕಾರಿನ ಹತ್ತಿರ ಬರುವದನ್ನು ಗಮನಿಸಿ ಆಪಾದಿತರು ಓಡಿ ಹೋಗಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ 24ಗಂಟೆಯ ಒಳಗೆ ಆರೋಪಿತರನ್ನು ಬಂಧಿದ್ದಾರೆ.