ಕಾರವಾರ: ಕೋಸ್ಟ್ ಗಾರ್ಡ್ ನೂತನ ಕಮಾಂಡರ್ ಕಾರವಾರ ಮೂಲದ ಮನೋಜ್ ಬಾಡ್ಕರ್ ಅವರು ಮೀನುಗಾರಿಕೆ ಫೆಡರೇಶನ್ನ ಅಧ್ಯಕ್ಷರು, ನಿರ್ದೇಶಕರು ಹಾಗೂ ಬೋಟ್ ಯೂನಿಯನ್ಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಕಮಾಂಡರ್ ಬಾಡ್ಕರ್ ಅವರು ಮಾತನಾಡಿ, ಸಮುದ್ರದಲ್ಲಿ ಗಸ್ತು ಹಿಂದೆಂದಿಗಿಂತಲೂ ಹೆಚ್ಚಾಗಿದ್ದು, ಸಮುದ್ರದಲ್ಲಿ ಸಂಚರಿಸುವ ಬೋಟ್ಗಳ ಬಗ್ಗೆ ಸಂದೇಶ ಮೂಡಿದರೆ ಕೂಡಲೇ ವಿಷಯವನ್ನು ಕೋಸ್ಟ್ ಗಾರ್ಡ್ ಗೆ ತಿಳಿಸಬೇಕು ಎಂದು ತಿಳಿಸಿದರು.
ಅಪರಿಚಿತ ಬೋಟ್ಗಳ ಸಂಚಾರದ ಬಗ್ಗೆ ಶಂಕೆ ವ್ಯಕ್ತವಾದ ಕೂಡಲೇ ಮಾಹಿತಿ ನೀಡಿದರೆ ನಾವು ಅವರನ್ನು ಶೀಘ್ರಗತಿಯಲ್ಲಿ ಪತ್ತೆ ಮಾಡಲು ಸಾಧ್ಯವಾಗಲಿದೆ ಎಂದು ಬಾಡ್ಕರ್ ಹೇಳಿದರು.
ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ನೌಕಾನೆಲೆಯವರು ಮೀನುಗಾರಿಕೆ ನಡೆಸುತ್ತಿರುವ ಬೋಟ್ನವರಿಗೆ ಆಗಾಗ ತೊಂದರೆ ಕೊಡುತ್ತಿರುವ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಅವರು ಕಮಾಂಡರ್ ಬಾಡ್ಕರ್ ಅವರ ಗಮನಕ್ಕೆ ತಂದರು.
ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಅವರು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಅವರ ಮೂಲಕ ವಿಷಯವನ್ನು ನೌಕಾನೆಲೆಯವರ ಗಮನಕ್ಕೆ ತರಬಹುದು ಎಂದು ಸಲಹೆ ನೀಡಿದರು.
ಕಾರವಾರದ ಕಡಲತೀರದಲ್ಲಿ ಕೋಸ್ಟ್ ಗಾರ್ಡ್ ಜಟ್ಟಿ ನಿರ್ಮಿಸುವು ವಿಷಯವು ಸಭೆಯಲ್ಲಿ ವ್ಯಕ್ತವಾಯಿತು. ಕಮಾಂಡರ್ ಬಾಡ್ಕರ್ ಮಾತನಾಡಿ, ಜಟ್ಟಿ ನಿರ್ಮಾಣದಿಂದ ಮೀನುಗಾರರಿಗೆ ತೊಂದರೆ ಆಗುವುದಿಲ್ಲ ಎಂದು ಹೇಳಿದರೆ ಮೀನುಗಾರರ ಮುಖಂಡರು ಜಟ್ಟಿ ನಿರ್ಮಾಣದಿಂದ ಸಾಂಪ್ರದಾಯಿಕ ಮೀನುಗಾರರಿಗೆ ತೊಂದರೆ ಆಗಲಿದೆ ಎಂದು ಅವರಿಗೆ ತಿಳಿಸಿದರು.
ಫೆಡರೇಶನ್ ಉಪಾಧ್ಯಕ್ಷ ವೆಂಕಟೇಶ ತಾಂಡೇಲ್, ನಿರ್ದೇಶಕ ಶ್ರೀಧರ ಹರಿಕಂತ್ರ, ಬೈತಖೋಲ ಮೀನುಗಾರ ಸಹಕಾರಿ ಸಂಘದ ಉಪಾಧ್ಯಕ್ಷ ಯೆಶ್ಯಾ ರಾಮ ಹರಿಕಂತ್ರ, ಬೈತಕೋಲ ಮೀನುಗಾರ ಸೇವಾ ಸಂಘದ ಅಧ್ಯಕ್ಷ ಪ್ರಶಾಂತ ಹರಿಕಂತ್ರ, ಕಾರವಾರ ಟ್ರಾಲರ್ ಬೋಟ್ ಯೂನಿಯನ್ ಅಧ್ಯಕ್ಷ ದಿಲೀಪ ಚಂಡೇಕರ್, ಕಾರವಾರ ತಾಲ್ಲೂಕು ಪರ್ಶಿನ್ ಬೋಟ್ ಸಹಕಾರಿ ಸಂಘದ ಅಧ್ಯಕ್ಷ ಪ್ರಶಾಂತ ತಾಂಡೇಲ್, ಉಪಾಧ್ಯಕ್ಷ ನಿತೀನ ಗಾಂವಕರ್, ನಿರ್ದೇಶಕ ಹೊನ್ನಾವರ ಬೋಟ್ ಯೂನಿಯನ್ ವಿವನ್ ಫರ್ನಾಂಡೀಸ್ ಇದ್ದರು.