ಕಾರವಾರ: ತಾಲೂಕಿನ ಶಿರವಾಡದ ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬುಧವಾರ ರಾತ್ರಿ ತಡರಾತ್ರಿ ಅಕಸ್ಮಿಕವಾಗಿ ಬೆಂಕಿ ತಗುಲಿದ್ದು ಗುರುವಾರವೂ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದೆ. ನಗರಸಭೆ ಸಿಬ್ಬಂದಿ, ಅಗ್ನಿಶಾಮಕ ದಳದವರು ಬೆಂಕಿ ಆರಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಬೆಂಕಿಯಿಂದ ಪ್ಲಾಸ್ಟಿಕ್ ಸುಟ್ಟ ವಾಸನೆ, ವಿಪರೀತ ಹೊಗೆಯಿಂದ ಇಂಡಸ್ಟ್ರಿಯಲ್ ಏರಿಯಾ, ಕೋಣಮಕ್ಕಿ ಗ್ರಾಮಸ್ಥರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕವೇ ಬೇಡ ಎಂದು ಸ್ಥಳಿಯರು ಹಲವಾರು ಬಾರಿ ಪ್ರತಿಭಟನೆ ಸಹ ಮಾಡಿದ್ದರು. ಈ ಹಿಂದೆಯೂ 3-4 ಬಾರಿ ಈ ರೀತಿ ಬೆಂಕಿ ಅನಾಹುತ ಆಗಿತ್ತು.
ಕಸದ ರಾಶಿ ಇರೊದರಿಂದ ಬೆಂಕಿ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ತಂದು ಅಗ್ನಿಶಾಮಕ ವಾಹನ ಗಳಿಗೆ ಪೂರೈಕೆ ಮಾಡಲಾಗುತ್ತಿದ್ದು ಎರಡು ವಾಹನಗಳು ಬೆಂಕಿ ಆರಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ.