ಕಾರವಾರ: ಶಿಕ್ಷಣ ಕ್ಷೇತ್ರದಲ್ಲಿ ಅಮುಲಾಗ್ರ ಬದಲಾವಣೆ ತರಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಮಾನಸಿಕವಾಗಿ ಕುಗ್ಗುತ್ತಿರುವ ಸಮಾಜ ಸರಿ ಮಾಡಲು ಶಿಕ್ಷಣ ನೀತಿ ಬದಲಾಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಲೋಕೋಪಯೋಗಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗುರುಭವನ, ಶಾಸಕರ ಮಾದರಿ ಶಾಲೆ, ಸರ್ಕಾರಿ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 11 ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ ನೆರೆವೇರಿಸಿ ಮಾತನಾಡಿದರು. ಸರ್ಕಾರ ಪ್ರತಿ ಹಂತದಲ್ಲೂ ಶಿಕ್ಷಣಕ್ಕೆ ಸಾಕಷ್ಟು ಒತ್ತು ನೀಡುತ್ತಿದೆ ಎಂದರು.
ನಮ್ಮನ್ನಾಳುವ ಬ್ರಿಟಿಷರು ಶಿಕ್ಷಣ ವ್ಯವಸ್ಥೆಯಲ್ಲಿ ಹಿಡಿತ ಸಾಧಿಸಿದ್ದರು. ಮೆಕಾಲೆ ಶಿಕ್ಷಣ ವ್ಯವಸ್ಥೆ ಮೂಲಕ ನಮ್ಮ ಮಾನಸಿಕತೆಗಳನ್ನ ಪರಾವಲಂಬಿ ಮಾನಸಿಕತೆಯನ್ನಾಗಿ ಮಾಡುವ ಅವರ ಪ್ರಯತ್ನ ಇಂದಿಗೂ ಇದೆ. ಇದು ಮಕ್ಕಳ ಜೊತೆ ಸದಾ ಇರುವ ಶಿಕ್ಷಕರಿಗೆ ಅರ್ಥವಾಗುತ್ತದೆ. ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದ ಬಿಜೆಪಿ ಇದೀಗ ರಾಷ್ಟ್ರೀಯತೆ ಆಧಾರದ ಮೇಲೆ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಮಗುವಿನ ಒಳಗಿರುವ ಆಂತಶಕ್ತಿಯನ್ನು ಹೊರಗೆ ತೆಗೆಯುವುದು ಶಿಕ್ಷಣ ವ್ಯವಸ್ಥೆ ಕೆಲಸ ಎಂದಿದ್ದರು. ಎಲ್ಲಿಯೂ ಶಿಕ್ಷಣವನ್ನು ತುಂಬಬೇಕು ಎಂದು ಹೇಳಿಲ್ಲ. ಆದರೆ ನಾವೆಲ್ಲರೂ ಶಿಕ್ಷಣವನ್ನು ಮಕ್ಕಳಿಗೆ ತುರುಕುವ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳ ಮುಕ್ತ ಕಲಿಕೆಗೆ ಅವಕಾಶಮಾಡಿಕೊಡಬೇಕು. ಅವರ ಕಲಿಕೆಗೆ ಬೇಕಾದ ವ್ಯವಸ್ಥೆ ಕಲ್ಪಿಸುವ ಮೂಲಕ ಅವರಿಗೆ ದೇವರು ನೀಡಿರುವ ಶಕ್ತಿಯನ್ನು ಹೊರತೆಗೆಯಲು ಮುಂದಾಗಬೇಕು ಎಂದರು.
ಬಳಿಕ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರು ಶಾಸಕಿ ರೂಪಾಲಿ ನಾಯ್ಕ ಮಾತನಾಡಿದರು. ನಗರಸಭೆ ಅಧ್ಯಕ್ಷ ನಿತೀನ್ ಪಿಕಳೆ, ನಗರಸಭೆ ಉಪಾಧ್ಯಕ್ಷ ಪಿಪಿ ನಾಯ್ಕ, ಉಪ ವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, ಡಿಡಿಪಿಐ ಹಣಮಂತಪ್ಪ ನಿಟ್ಟೂರು, ಉಪ ನಿರ್ದೇಶಕ ಈಶ್ವರ ನಾಯ್ಕ ಎಂಜಿನಿಯರ್ ಕೆ.ಎ ದುರ್ಗಾದಾಸ್, ಎಇ ರಾಮಚಂದ್ರ ಗಾಂವಕರ್, ಉನಿರ್ದೇಶಕ ಎನ್.ಜಿ ನಾಯಕ ಇನ್ನಿತರರು ಇದ್ದರು.