ಕಾರವಾರ: ಜಿಲ್ಲೆಯ ಅರಣ್ಯ ಹಕ್ಕು ಸಮಸ್ಯೆಯ ಬಗ್ಗೆ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಜಿಪಿಎಸ್ ಆಗಿ ತಾಂತ್ರಿಕ ಕಾರಣಗಳಿಂದ ಅರಣ್ಯ ಹಕ್ಕುಪತ್ರ ಸಿಗದ ಫಲಾನುಭವಿಗಳಿಗೆ ಯಾವುದೇ ಆಡಳಿತಾತ್ಮಕ ಮತ್ತು ಅರಣ್ಯ ಅಧಿಕಾರಿಗಳು ತೊಂದರೆ ನೀಡಬಾರದೆಂದು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಬುಧವಾರ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟೂ ೮೮,೪೫೩ ಅರ್ಜಿಗಳು ಅರಣ್ಯ ಹಕ್ಕಿಗಾಗಿ ಬಂದಿದ್ದು ಅದರಲ್ಲಿ ೨೮೫೫ ಅರ್ಜಿದಾರರಿಗೆ ಹಕ್ಕುಪತ್ರ ನೀಡಲಾಗಿದೆ. ಸುಮಾರಿ ೧೬ ಸಾವಿರ ಅರ್ಜಿಗಳು ತನಿಖಾ ಹಂತದಲ್ಲಿದ್ದು ೫೯,೫೦೫ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ ಎಂದರು.
ತಾಂತ್ರಿಕ ಕಾರಣಗಳಿಂದ ವಿಲೇವಾರಿಯಾಗದ ಅರ್ಜಿದಾರರಿಗೆ ತೊಂದರೆ ನೀಡಬಾರದೆಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಯಿತು. ಕೋವಿಡ್ ಕಾಲದ ನಂತರ ಗ್ರಾಮ ಸಮಿತಿಗಳ ರಚನೆ ಸ್ಥಗಿತವಾಗಿದ್ದು ಈಗ ಮತ್ತೆ ಅಗತ್ಯ ಅಗತ್ಯವಿರುವೆಡೆ ಸಮಿತಿಯನ್ನು ರಚಿಸಲು ಸಭೆಯಲ್ಲಿ ಠರಾವು ಮಾಡಲಾಗಿದೆ. ಸಧ್ಯ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಸದಸ್ಯರು ಇಲ್ಲದಿರುವುರಿಂದ ಇರುವ ಜನಪ್ರತಿನಿಧಿಗಳನ್ನು ಬಳಸಿಕೊಂಡು ಸಭೆಗಳನ್ನು ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.