ಕಾರವಾರ: ಅತಿಕ್ರಮಣ ಜಾಗ ಸಕ್ರಮ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಜಿ. ಯಲಕಪಾಟಿ ನೇತೃತ್ವದಲ್ಲಿ ಶಿರವಾಡದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
ಶಿರವಾಡದ ಗ್ರಾಮಸ್ಥರಿಗೆ ಅತಿಕ್ರಮಣ ಸಕ್ರಮ ಮಾಡಲು ಹತ್ತಾರು ವರ್ಷಗಳಿಂದ ಹೋರಾಡಿದರೂ ನ್ಯಾಯ ಒದಗಿಸಿ ಕೊಡದ ಕಾರಣ ಶಿರವಾಡದ ಗ್ರಾಮ ಪಂಚಾಯತಿಯಿಂದ ಬಂಗಾರಪ್ಪನಗರದ ಮಾರ್ಗವಾಗಿ ಗೀತಾಂಜಲಿ ಚಿತ್ರಮಂದಿರ ಹೂವಿನಚೌಕ, ಸವಿತಾ ಹೋಟೆಲ್, ಸುಭಾಷ ಸರ್ಕಲ್, ಅಂಬೇಡಕರ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಶಿರವಾಡದ ಗ್ರಾಮಸ್ಥರು ಕುಟುಂಬ ಸಮೇತವಾಗಿ ಪಾದಯಾತ್ರೆಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾರವಾರದ ಶಿರವಾಡದಲ್ಲಿ ಸುಮಾರು 35 ರಿಂದ 40 ವರ್ಷಗಳು 200 ಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರ ಜಾಗದಲ್ಲಿ ಹಾಗೂ ಅರಣ್ಯ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಈ ಅತಿಕ್ರಮಣ ಜಾಗದಲ್ಲಿ ವಾಸಮಾಡುತ್ತಿರುವ ಕಾರಣ ಇಲ್ಲಿನ ಜನರು ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೆ ವಂಚನೆಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಅತಿಕ್ರಮಣ ಸಕ್ರಮ ಮಾಡಿಕೊಡುವ ಕುರಿತು ಹಲವಾರು ಸಲ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಹ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿ, ಜಿ.ಪಂ ಕಚೇರಿಯಲ್ಲಿ ಈ ಬಗ್ಗೆ ಚರ್ಚೆ ಸಲ ನಡೆಸಲಾಗಿದೆ. ಆದರೆ ಇದುವರೆಗೂ ಯಾವುದೇ ಸೂಕ್ತ ಪರಿಹಾರ ಕಲ್ಪಿಸಿಲ್ಲ.
ಈಗಾಗಲೇ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರಕ್ಕೆ ಈಗ ಇರುವ ಜಾಗವನ್ನು ಸಕ್ರಮ ಮಾಡುವ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಹಲವಾರು ಬಾರಿ ಹೋರಾಟದ ಮೂಲಕ ಹಾಗೂ ಮನವಿ ಸಹ ನೀಡಲಾಗಿದೆ.
ಪತ್ರಿಭಟನೆಯಲ್ಲಿ ಶಿರವಾಡದ ಗ್ರಾಮಸ್ಥರು ಹಾಗೂ ಕದರವೇ ಕಾರ್ಯಕರ್ತರಾದ ಜಾಫರ್, ನರಸಿಂಹ ನಾಯ್ಕ, ಯಲ್ಲಪ್ಪ ಎನ್. ವಡ್ಡರ, ಶಂಕರ್ ವಡ್ಡರ, ಹುಸೇನ್, ಶಾಂತಾ ಆಚಾರಿ, ಗ್ರಾಪಂ ಸದಸ್ಯೆ ಗಂಗಾ ನಾಯ್ಕ, ಶಾಂತಾ ಇ. ವೈ, ಶಾರದಾ ಲಮಾಣಿ, ಬಸವರಾಜ್ ವಾಲ್ಮೀಕಿ, ರುಸ್ತುಂ ಸಿದ್ಧಿ, ಕೆಂಪಣ್ಣ ಮಣ್ಣವದ್ದರ್, ಗಣೇಶ ಹಾಗೂ ಇನ್ನಿತರರು ಇದ್ದರು.