ಕಾರವಾರ: ಖಾರ್ಗೆಜೂಗ್ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಖಾರ್ಗಾದ ಗ್ರಾಮಸ್ಥರು ಸೋಮವಾರ ಶಾಸಕಿ ರೂಪಾಲಿ ನಾಯ್ಕ ಅವರನ್ನು ಭೇಟಿ ಮಾಡಿ ನಗರದಲ್ಲಿ ಮನವಿ ಮಾಡಿದರು.
ಜನರ ಮನವಿಗೆ ಸ್ಪಂದಿಸಿದ ಶಾಸಕಿ ರೂಪಾಲಿ ಅವರು ಸ್ಥಳದಲ್ಲಿಯೇ ಕಾಮಗಾರಿಯ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಮತ್ತು ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.ರಸ್ತೆ ನಿರ್ಮಾಣಕ್ಕೆ ಹತ್ತು ತಿಂಗಳ ಹಿಂದೆಯೇ ಟೆಂಡರ್ ಆಗಿದೆ. ಇನ್ನೂ ಕಾಮಗಾರಿ ಆರಂಭಿಸಿದೇ ಇರುವ ಬಗ್ಗೆ ಕಾರಣಗಳನ್ನು ಶಾಸಕರು ಕೇಳಿದರು.
ರಸ್ತೆ ಅಗದೆ ಇರುವುದರಿಂದ ಸ್ಥಳೀಯರು ನಮ್ಮ ಬಳಿ ಬಂದಿದ್ದಾರೆ ಅವರಿಗೆ ನಾನು ಏನೆಂದು ಹೇಳಲಿ ಎಂದು ಖಾರವಾಗಿ ಪ್ರಶ್ನಿಸಿದರು. ಡಿಸೆಂಬರ್ 31ರಿಂದ ಸ್ಥಳೀಯ ದೇವರ ಜಾತ್ರೆ ಇರುವುದರಿಂದ ಮೊದಲು ಮಣ್ಣು ಹಾಕಿ ಸಂಪರ್ಕ ರಸ್ತೆಯನ್ನು ಸಮತಟ್ಟು ಮಾಡಿಕೊಟ್ಟು ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಎರಡು ದಿನಗಳಲ್ಲಿ ರಸ್ತೆಯನ್ನು ಸಮತಟ್ಟು ಮಾಡದೇ ಇದ್ದರೆ ಸ್ಥಳಕ್ಕೆ ನಾನೇ ಬಂದು, ನಿಂತು ಕಾಮಗಾರಿ ಮಾಡಿಸಬೇಕಾಗುತ್ತದೆ ಎಂದು ಗದರಿದರು. ಬಳಿಕ ಸ್ಥಳೀಯರೊಂದಿಗೆ ಮಾತನಾಡಿದ ಶಾಸರು, ರಸ್ತೆ ನಿರ್ಮಾಣಕ್ಕೆ ಅನಗತ್ಯ ವಿಳಂಬವಾಗಿದೆ. ಕೋವಿಡ್ ಸಂದರ್ಭದಲ್ಲಿ ಅನೇಕ ಅನುದಾನ ಸರ್ಕಾರಕ್ಕೆ ಮರಳಿ ಹೋಗಿತ್ತು. ಆದರೆ, ಖಾರ್ಗಾ ರಸ್ತೆಯ ಅನುದಾನವನ್ನು ಮರಳಿ ಹೊಗದಂತೆ ತಡೆದು ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದೇನೆ. ಜನವರಿಯೊಳಗೆ ರಸ್ತೆ ಕಾಮಗಾರಿ ಪೂರ್ಣ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.