ಕಾರವಾರ: ಶಿರಸಿಯಲ್ಲಿ ಡಿ.17 ರಂದು ಕರ್ನಾಟಕ ರಾಜ್ಯದ ಅರಣ್ಯವಾಸಿಗಳ ಸಮಸ್ಯೆಗಳಿಗೆ ಅರಣ್ಯ ಭೂಮಿ ಹಕ್ಕಿನೊಂದಿಗೆ 5 ಬೇಡಿಕೆಗಳ ಹಕ್ಕೊತ್ತಾಯಕ್ಕೆ ಆಗ್ರಹಿಸಿ ರಾಜ್ಯಮಟ್ಟದ ಅರಣ್ಯವಾಸಿಗಳನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ಬೃಹತ್ ರ್ಯಾಲಿ ಸಂಘಟಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅರಣ್ಯವಾಸಿಗಳ ಪರವಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವಂತೆ, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನಕ್ಕೆ ಆದೇಶ ಮಾಡುವಂತೆ, ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳ ನಿಯಂತ್ರಿಸುವತೆ, 1978 ರ ಪೂರ್ವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರದಿಂದ ಅರಣ್ಯೇತರ ಚಟುವಟಿಕೆಗೆ ಬಿಡುಗಡೆ ಮಾಡಿದ 2,513 ಕುಟುಂಬಗಳಿಗೆ ಹಾಗೂ ಜಿಲ್ಲೆಯಲ್ಲಿ 6,156 ಹಂಗಾಮಿ ಲಾಗಣಿದಾರರಿಗೆ ಖಾಯಂ ಮಂಜೂರಿ ಹಕ್ಕು ಪತ್ರ ನೀಡುವಂತೆ ಆಗ್ರಹಿಸಲಾಗುವುದು. ಅಲ್ಲದೇ ಅರಣ್ಯ ಹಕ್ಕು ಕಾಯಿದೆ ಉಲ್ಲೇಖದಂತೆ, ಗುಜರಾತ್ ಉಚ್ಛ ನ್ಯಾಯಾಲಯದ ಆದೇಶದಂತೆ ಹಾಗೂ ಕೇಂದ್ರ ಸರಕಾರದ ಬುಡಕಟ್ಟು ಮಂತ್ರಾಲಯದ ನಿರ್ದೇಶನದಂತೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗೆ ನಿರ್ದಿಷ್ಠ ದಾಖಲೆಗಳಿಗೆ ಒತ್ತಾಯಿಸದೇ ಮಂಜೂರಿ ನೀಡುವ ಕ್ರಮ ಜರುಗಿಸುವಂತೆ ರ್ಯಾಲಿಯಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 89,167 ಅರ್ಜಿಗಳು ದಾಖಲಿಸಿದ್ದು ಅವುಗಳಲ್ಲಿ 2,855 ಅರ್ಜಿಗಳು ಮಾತ್ರ ಸ್ವೀಕಾರವಾಗಿದ್ದು 69,733 ಅರ್ಜಿಗಳು ತೀರಸ್ಕಾರವಾಗಿವೆ. ರಾಜ್ಯದಲ್ಲಿ 2,95,048 ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 15,798 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದ್ದು, ದೇಶದಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯವಾಸಿಗಳ ಅವಲಂಭಿತ ಸಂಖ್ಯೆಯಲ್ಲಿ 5 ನೇ ಸ್ಥಾನದಲ್ಲಿದ್ದರೂ, ಹಕ್ಕು ಪತ್ರ ಪಡೆಯುವಲ್ಲಿ ಕರ್ನಾಟಕ 16 ನೇ ಸ್ಥಾನದಲ್ಲಿ ಇರುವುದು ವಿಷಾದಕರ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಂಜುನಾಥ ಮರಾಠಿ, ರಮಾನಂದ ನಾಯ್ಕ, ಭೀಮ್ಸಿ ವಾಲ್ಮೀಕಿ, ರಾಜೇಶ ಮಿತ್ರ ನಾಯ್ಕ ಮುಂತಾದವರು ಇದ್ದರು.