ಕಾರವಾರ: ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆ ಐದು ಬಾರಿ ಪಂಕ್ಚರ್ ಆಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ ಟೀಕಿಸಿದ್ದಾರೆ.
ನಗರದ ಮಾಲಾದೇವಿ ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರಜಾಧ್ವನಿಯ ಯಾತ್ರೆಯ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಧ್ವನಿ ಅಡಗಿದೆ ಕಾಂಗ್ರೆಸ್ ಮನೆ ಖಾಲಿಯಾಗುತ್ತಿದೆ, ಬಿಜೆಪಿ ಮನೆ ತುಂಬುತ್ತಿದೆ ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿಯ ವಿರುದ್ಧ ಹೋರಾಟ ಮಾಡಬೇಕಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವೈಯಕ್ತಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಹರಡುತ್ತಿವೆ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟ ಅನುದಾನ ಎಷ್ಟು ಎಂದು ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ ಅವರಿಗೆ ಸವಾಲೆಸೆದರು.
ಕುಮಾರಣ್ಣ ತಾಜ್ ಹೊಟೆಲ್ ನಲ್ಲಿ ಕುಳಿತು ಅಧಿಕಾರ ನಡೆಸಿದರೆ, ಸಿದ್ದರಾಮಯ್ಯ ನರಹಂತಕ ಮುಖ್ಯಮಂತ್ರಿ ಎಂದರು. ಕರಾವಳಿ ಸುತ್ತಾಡಿ ಬಂದಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಕಾರವಾರದಲ್ಲಿ ಗೆಲುವು ಸಾಧಿಸುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿಗೆ 150 ಸ್ಥಾನ ದೊರೆಯಲಿದೆ ಎಂದರು.
ಭಟ್ಕಳ ಪ್ರವೇಶ ಮಾಡಿ ಕಾರವಾರಕ್ಕೆ ಬರುವ ಮಾರ್ಗದಲ್ಲಿ ಅಂಕೋಲಾ ಪಟ್ಟಣವನ್ನು ನೋಡಿದೆ. ಅಂಕೋಲಾದಲ್ಲಿ ಚತುಷ್ಪಥ ರಸ್ತೆಗಳು ಆಗಿದ್ದು ಬೆಂಗಳೂರು ನೋಡಿದ ಅನುಭವ ಆಗುತ್ತಿದೆ. ಕಾರವಾರ ಸಿಂಗಾಪುರವಾಗಿ ಬೆಳೆಯುತ್ತಿದೆ ಎಂದಾಗ ಸಭಿಕರು ಕರಾಡತನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವಧಿಯಲ್ಲಿ 24 ಹಿಂದೂಗಳ ಹತ್ಯೆಯಾಯಿತು. ಗೋಹಂತರ ರಕ್ಷಣೆ ಆಯಿತು. ಇಂತಹ ಅಹಂಕಾರಿ, ದುರಂಕಾರಿ ಮುಖ್ಯಮಂತ್ರಿ ಬೇಡ ಎಂದು 2018ರಲ್ಲಿ ರಾಜ್ಯದ ಜನತೆ ತೀರ್ಮಾನ ಮಾಡಿದ್ದರಿಂದ ಬಿಜೆಪಿ ಸರ್ಕಾರಕ್ಕೆ ಹೆಚ್ಚು ಸೀಟುಗಳು ಬಂತು. ಆದರೆ, ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಅಧಿಕಾರಕ್ಕೆ ಬಂತು. ಆದರೆ, ರಾಜ್ಯದ ಇತಿಹಾಸದಲ್ಲಿ ಹಿಂದೇದು ಕಂಡರಿಯದ ಬೆಳವಣಿಗೆ ನಡೆಯಿತು. ಆಡಳಿತ ಪಕ್ಷದ 17 ಶಾಸಕರು ಸರ್ಕಾರ ತೊರೆದು ಬಿಜೆಪಿಗೆ ಬಂದು ಬಿಜೆಪಿ ಸರಕಾರ ರಚನೆ ನೆರವಾದರು. ಅದರ ಫಲವಾಗಿ ರಾಜ್ಯದಲ್ಲಿ ಪರಿವರ್ತನೆ ಪ್ರಾರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದರು.