ಕಾರವಾರ: ಬಾಲ್ಯ ವಿವಾಹದಿಂದ ಹೆಣ್ಣು ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವುದು ಅಲ್ಲದೇ ಮರಣಾಂತಿಕ ಕಾಯಿಲೆಗಳಿಗೂ ಒಳಗಾಗುವ ಸಾಧ್ಯತೆ ಇರುತ್ತದೆ. ಈ ಅನಿಷ್ಠ ಪದ್ದತಿಯನ್ನು ಸಮಾಜದಿಂದ ಹೋಗಲಾಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಖಂಡೂ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀ ಶಕ್ತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಬಾಲ್ಯವಿವಾಹ ನಿಷೇಧ ಕುರಿತಂತೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನವೆಂಬರ್-೨೦೨೨ ರವರೆಗೆ ದಾಖಲೆಯಾದ ಒಟ್ಟು ೨೧ ಬಾಲ್ಯವಿವಾಹ ಪ್ರಕರಣಗಳನ್ನು ತಡೆದಿರುವುದು ಕಂಡು ಬಂದಿರುತ್ತದೆ.
ಇದರ ಹೊರತಾಗಿಯೂ ಕೆಲವು ಪ್ರಕರಣಗಳು ಇರುವ ಸಾಧ್ಯತೆಯಿರುತ್ತದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದರು. ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ ಬಳಿಕ ಶಂಕರ ರಾವ್ ಮಾತನಾಡಿ ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಮೇಲಾಗುವ ಶಾರೀರಿಕ ಮತ್ತು ದೈಹಿಕ ತೊಂದರೆಯಾಗುತ್ತದೆ. ಹೀಗಾಗಿ ಬಾಲ್ಯ ವಿವಾಹವನ್ನು ತಡೆಯಲು ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಹಬೀಬಸಾಬ ಮುಲ್ಲಾ ಮಾತನಾಡಿ, ಬಾಲಕಾರ್ಮಿಕರ ಕುರಿತು ಮಾಹಿತಿ ನೀಡಿದರು. ನ್ಯಾಯವಾದಿ ಎ.ಆರ್.ಬಿ ಡಿಸೋಜಾ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಬಾಲಕಾರ್ಮಿಕರ ಬಗ್ಗೆ ಈ ವಿಷಯದ ಕುರಿತು ಉಪನ್ಯಾಸ ನೀಡಿದರು.
ಘಟಕ ಆಡಳಿತಾಧಿಕಾರಿ ಮಂಜುಳಾ ಪಾಟೀಲ “ಸಖಿ” ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಸ್ವಾಗತಿಸಿದರು. ಐಸಿಡಿಎಸ್ ನಿರೂಪಣಾಧಿಕಾರಿ ವಿರೂಪಾಕ್ಷ. ಪಿ. ಪಾಟೀಲ ವಂದಿಸಿದರು. ಸಭೆಯಲ್ಲಿ ತಹಶೀಲ್ದಾ ನಿಶ್ಚಲ್ ಎಫ್ ನೊರೊನಾ, ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ನ್ಯಾಯಾವಾದಿ ಎ.ಆರ್.ಬಿ ಡಿಸೋಜಾ ಮುಂತಾದವರು ಇದ್ದರು.