ಸಂಪಾಜೆ, ಡಿ.21: ಚೆಡಾವು-ಸಂಪಾಜೆ ನೇತಾಜಿ ಗೆಳೆಯರ ಬಳಗ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಪಾಜೆ, ಕೊಡಗು ಜಿಲ್ಲಾ ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ ಪಠ್ಯೇತರ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಸಂಪಾಜೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷರಾದ ನಿರ್ಮಲ ಭರತ್ ಉದ್ಘಾಟಿಸಿದರು.
ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ಪೆರಾಜೆ ಮಾತಾನಾಡಿ, ವಿದ್ಯಾರ್ಥಿಗಳು ಓದುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಬೇಕಾದರೆ, ಪರಿಪೂರ್ಣವಾದ ಉತ್ತಮ ಶಿಕ್ಷಣ ಪಡೆಯಬೇಕು. ಎಲ್ಲಾ ವಿದ್ಯಾರ್ಥಿಗಳು ಈಗಿನಿಂದಲೇ ಕಥೆ ಪುಸ್ತಕ, ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಪ್ರತಿ ಶಾಲೆಯಲ್ಲೂ ನಡೆಯಲಿ ಎಂದರು.
ನಂತರ ವಿದ್ಯಾರ್ಥಿಗಳಿಗೆ ಜಾನಪದ ಗೀತೆ, ಛದ್ಮವೇಶ,ಚಿತ್ರಕಲೆ,ಭಾಷಣ ಸ್ಪರ್ಧೆಗಳು ನಡೆಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಜಯಕುಮಾರ್ ಚೆದ್ಕಾರ್, ಸಂಪಾಜೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶೋಭಾ ರಾಣಿ, ನೇತಾಜಿ ಗೆಳೆಯರ ಬಳಗದ ಖಜಾಂಚಿ ಹೆಚ್.ಸಿ. ನಾರಾಯಣ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಬಿ.ಶಶಿಕುಮಾರ್ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ಪಿ.ಎಲ್.ಸುರೇಶ್, ನೇತಾಜಿ ಗೆಳೆಯರ ಬಳಗದ ಕಾರ್ಯದರ್ಶಿ ಹೆಚ್.ಬಿ. ಸುಂದರ ಹಾಜರಿದ್ದರು.