ಕಾರವಾರ: ಕರಾವಳಿ ಹಬ್ಬದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ನಡೆಸಲಾಗಿದ್ದ ರಾಷ್ಟ್ರೀಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಎಂದು ನೀಡಲಾಗಿದ್ದ ಚೆಕ್ ನಾಲ್ಕು ಬಾರಿ ಬೌನ್ಸ್ ಆಗಿದ್ದು, ಕಾರ್ಯಕ್ರಮದ ಆಯೋಜಕರು ತಮಗೆ ವಂಚನೆ ಮಾಡಿದ್ದಾರೆಂದು ಗೋವಾದ ದಿ ಯುನಿಟಿ ಡ್ಯಾನ್ಸ್ ಗ್ರೂಪ್ ನ ಸದಸ್ಯರು ಆರೋಪಿಸಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡ್ಯಾನ್ಸ್ ಟೀಮ್ ನ ದೇವೇಶ್ ನಾಯ್ಕ, ಇದೇ ವರ್ಷದ ಏಪ್ರಿಲ್ ಸಂದರ್ಭದಲ್ಲಿ ತಾಂಡವ ಕಲಾನಿಕೇತನ ಎಂಬ ಸಂಸ್ಥೆಯಿಂದ ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಆಯೋಜಿಸಿದ್ದ ಕರಾವಳಿ ಹಬ್ಬದ ಡ್ಯಾನ್ ಕಾಂಪಿಟೇಶನ್ ನಲ್ಲಿ ಅನೇಕ ಡ್ಯಾನ್ಸ್ ಗ್ರೂಪ್ ಗಳು ಭಾಗವಹಿಸಿದ್ದವು. ಅಂತಿಮವಾಗಿ ನಮ್ಮ ಯುನಿಟಿ ಗ್ರೂಪ್ ವಿಜಯಶಾಲಿಯಾಗಿ ಫಸ್ಟ್ ಫ್ರೈಜ್ 50 ಸಾವಿರ ರೂಪಾಯಿಗಳ ಚೆಕ್ ಪಡೆದುಕೊಂಡಿದ್ದೆವು.
ಆದರೆ ಈ ಚೆಕ್ ಈವರೆಗೆ ನಾಲ್ಕು ಬಾರಿ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿದೆ ಎಂದು ತಿಳಿಸಿದ್ದಾರೆ. ಚೆಕ್ ಬೌನ್ಸ್ ಅಷ್ಟೇ ಅಲ್ಲ. ಚೆಕ್ ನೀಡಿದ್ದ, ಚೆಕ್ ಗೆ ಸಹಿ ಹಾಕಿದ್ದ ತಾಂಡವ ಕಲಾನಿಕೇತನ ಸಂಸ್ಥೆಯ ಮಂಜುನಾಥ ನಾಯ್ಕ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದರೂ ಸ್ಪಂದಿಸಿಲ್ಲ. ಅಲ್ಲದೇ ಈತ ನೀಡಿದ್ದ ಅಡ್ರೆಸ್ ಗಳಿಗೆ ನೋಟಿಸ್ ನೀಡಿದರೂ ಅಡ್ರೆಸ್ ತಪ್ಪಾಗಿದೆಯೆಂದು ನೋಟಿಸ್ ಕೂಡ ವಾಪಸ್ಸು ಬಂದಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಸುನೀಲ ನಾಯ್ಕ ಹಣಕೊಣ ಮಾತನಾಡಿ, ಕುಮಟಾ ಮೂಲದವರು ಕಾರವಾರದಲ್ಲಿ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಹೊರ ರಾಜ್ಯಗಳ ಹತ್ತಾರು ತಂಡಗಳು ಭಾಗವಹಿಸಿದ್ದವು. ಈ ಪೈಕಿ ಗೋವಾದ ಈ ಯುನಿಟಿ ಗ್ರೂಪ್ ಕೂಡ ಒಂದು. ಆದರೆ ಈ ರೀತಿ ವಂಚನೆ ಮಾಡಿರುವುದರಿಂದ ಕಾರವಾರದ ಹೆಸರು ಹಾಳಾಗುತ್ತಿರುವುದಷ್ಟೇ ಅಲ್ಲದೇ,ಬೇರೆ ರಾಜ್ಯಗಳಲ್ಲಿ,ಅದರಲ್ಲೂ ಗೋವಾದೊಂದಿಗಿನ ಸಂಬಂಧ ಹಳಸಲು ಕಾರಣವಾಗುತ್ತಿದೆ. ಹೀಗಾಗಿ ಇಂಥವರಿಗೆ ಮತ್ತೆ ಇಲ್ಲಿ ಕಾರ್ಯಕ್ರಮಗಳನ್ನ ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಿಧಂ ಹಾರ್ಟ್ ಬೀಟ್ ಡ್ಯಾನ್ಸ್ ಗ್ರೂಪ್ ನ ವಿಜಯೇಂದ್ರ ಕುಮಾರೇಶ್, ಪೂನಂ ಇದ್ದರು.