ಕಾರವಾರ: ಕಳೆದ 2017 ರಲ್ಲಿ ಸಾವಿಗೀಡಾದ ಹೊನ್ನಾವರದ ಪರೇಶ್ ಮೇಸ್ತನ ಸಾವಿನ ಸತ್ಯಾಂಶವನ್ನು ಬಿಜೆಪಿ ಮುಚ್ಚಿಟ್ಟು ರಾಜಕೀಯವಾಗಿ ಬಳಸಿಕೊಂಡಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಪರೇಶ್ ಮೇಸ್ತ ಅವನದ್ದು ಸಹಜ ಸಾವು. ನೀರಲ್ಲಿ ಮುಳುಗಿ ಮರಣ ಹೊಂದಿದ್ದಾರೆ ಎಂದು 2019 ರಲ್ಲಿಯೇ ಮಣಿಪಾಲಿನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ತಿಳಿಸಿದ್ದಾರೆ.
ಆದರೆ ಈ ವಿಷಯವನ್ನು ಮುಚ್ಚಿಟ್ಟ ಬಿಜೆಪಿಯು ಜನರ ದಿಕ್ಕು ತಪ್ಪಿಸಿದೆ. ಅಲ್ಲದೇ ಘಟನೆ ನಡೆದ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಇದ್ದ ಕಾರಣ ಕಾಂಗೆಸ್ ಪಕ್ಷವೇ ಪರೇಶ್ ಸಾವಿಗೆ ಕಾರಣ ಎಂದು ಬಿಂಬಿಸಿದ್ದಾರೆ. ಈ ವಿಷಯವನ್ನು ರಾಜಕೀಯವಾಗಿ ಬಳಸಿ 2018 ರ ಚುನಾವಣೆಯಲ್ಲಿ ಕರಾವಳಿಯ 3 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ ಎಂದು ಆರೋಪಿಸಿದರು.
ನಿಜವಾಗಿಯೂ ಅದು ಹಾತ್ಯೆಯೇ ಆಗಿದ್ದರೆ ನಾವು ಕೂಡ ವಿರೋಧಿಸುತ್ತೇವೆ. 2018 ರ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದೆ. ಆದರೂ ಮೇಸ್ತ ಸಾವಿನ ಪ್ರಕರಣ ಭೇದಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಮೇಲೆ ಸಾಕ್ಷಿ ನಾಶ ಆರೋಪ ಮಾಡುವವರು ದಾಖಲೆ ನೀಡಿ ಅವರನ್ನು ಬಂಧಿಸಲು ಏಕೆ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಹಿಂದೆ ಬಿಜೆಪಿಯ ಜಿಲ್ಲಾ ವಕ್ತಾರ ನಾಗರಾಜ ನಾಯಕ ಅವರು ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೂರನೇ ಆರೋಪಿ ಮಾಡಬೇಕು ಎಂದು ಹೇಳಿರುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಎನ್ನುವ ಕನಿಷ್ಠ ಗೌರವವಾದರೂ ಇರಬೇಕು. ಅಲ್ಲದೇ ಅವರನ್ನು ಮೂರನೇ ಆರೋಪಿ ಎನ್ನುವವರು ಮೊದಲ ಆರೋಪಿ ಯಾರೂ ಎನ್ನುವುದನ್ನ ಹೇಳಲಿ ಎಂದರು.
ಕ್ಷೇತ್ರದ ರಾಜಕೀಯದಲ್ಲಿ ಬಗ್ಗೆ ಮಾತನಾಡಿ, ಹಾಲಿ ಶಾಸಕಿಯವರು ತಮ್ಮ ಅಧಿಕಾರದಲ್ಲಿ ಕ್ಷೇತ್ರಕ್ಕೆ ಯಾವುದೇ ಹೊಸ ಯೋಜನೆ ತಂದಿಲ್ಲ. ಹಿಂದೆ ನಾನು ಅಧಿಕಾರದಲ್ಲಿದ್ದಾಗ ಅನುಮೋದನೆಗೊಂಡ ಯೋಜನೆಯನ್ನು ಕಾರ್ಯರೂಪಕ್ಕಷ್ಟೇ ತಂದಿದ್ದಾರೆ. ಕೆಲವು ಯೋಜನೆಗಳನ್ನು ಕೈಬಿಟ್ಟಿದ್ದೂ ಇದೆ. ಚುನಾವಣೆಯ ವಿಷಯದಲ್ಲಿ ಕಾಂಗ್ರೆಸ್ ಸಕ್ರಿಯವಾಗಿಯೇ ಇದೆ. ಕಾರ್ಯಕರ್ತರಿಗೆ ಚುನಾವಣೆಯ ಬಗ್ಗೆ ಮಾಹಿತಿ ನೀಡಿ ಪಕ್ಷ ಸಂಘಟನೆಯ ಬಗ್ಗೆ ಆಗಾಗ ಸಭೆ ನಡೆಸುತ್ತಿದ್ದೇವೆ. ಈಬಾರಿ ನಮ್ಮ ಗೆಲವು ಖಚಿತ ಎಂದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ್, ಕಾಂಗ್ರೆಸ್ ಪ್ರಮುಖರಾದ ವಿ ಪಿ ನಾಯ್ಕ್, ರಾಜೇಂದ್ರ ಅಂಚೇಕರ್ ಹಾಗೂ ರವೀಂದ್ರ ಅಮದಳ್ಳಿ ಇದ್ದರು.