ಕಾರವಾರ: ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದ್ದ 2.69 ಕೋಟಿ ರೂ. ವಂಚನೆ ಪ್ರಕರಣದ ಆರೋಪಿ, ಸಹಾಯಕ ವ್ಯವಸ್ಥಾಪಕನನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಡಾ. ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದ ಕರೆಂಟ್ ಅಕೌಂಟ್ ನಿಂದ ತನ್ನ ಹೆಂಡತಿಯ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ ಅಸಿಸ್ಟೆಂಟ್ ಮ್ಯಾನೇಜರ್, ಆಂಧ್ರಪ್ರದೇಶ ಮೂಲದ ಕುಮಾರ್ ಬೋನಾಲನನ್ನ ಕೊನೆಗೂ ಯಲ್ಲಾಪುರ ಪೊಲೀಸರು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ವಿಚಾರಣೆಯನ್ನ ಪೊಲೀಸರು ಮುಂದುವರಿಸಿದ್ದಾರೆ.
ಆರೋಪಿಯ ವಿಚಾರಣೆಯ ವೇಳೆ ತಾನು ಲಪಟಾಯಿಸಿದ್ದ ಹಣವನ್ನೆಲ್ಲ ಆನ್ಲೈನ್ ಆಟದ ಗೀಳಿಗೆ ಬಿದ್ದು ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಸಿಕ್ಕ ಸಿಕ್ಕ ಆನ್ಲೈನ್ ಗೇಮ್ ಗಳನ್ನ ಆಡುವ ಚಟಕ್ಕೆ ಬಿದ್ದಿದ್ದ ಈತ, ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯುವುದು, ಆನ್ಲೈನ್ ನಲ್ಲಿ ಆಟವಾಡುವುದು ಮಾಡುತ್ತಿದ್ದರಿಂದ ಎಲ್ಲಾ ಹಣವನ್ನೂ ಆರೋಪಿ ಕಳೆದುಕೊಂಡಿದ್ದಾನೆ.
ಸದ್ಯ ಆನ್ಲೈನ್ ಗೇಮ್ ಆಡಿ ಆರೋಪಿ ತನ್ನ ಬಳಿಯಿದ್ದ ಎಲ್ಲ ಹಣವನ್ನ ಕಳೆದುಕೊಂಡಿದ್ದು, ಇದೀಗ 2.69 ಕೋಟಿ ಹಣದ ವಸೂಲಿ ಹೇಗೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ಖಾತೆದಾರರಿಗೆ ಆತಂಕ ಬೇಡ. ಲೂಟಿಯಾಗಿರೋದು ಬ್ಯಾಂಕ್ ಕರೆಂಟ್ ಅಕೌಂಟ್ ಹಣ ಹೊರತು ಗ್ರಾಹಕರದ್ದಲ್ಲ ಎಂದು ಎಸ್ಪಿ ಮಾಹಿತಿ ನೀಡಿದರು