ಕಾರವಾರ: ತಾಲೂಕಿನ ಕುಗ್ರಾಮಗಳಾದ ಗೋಯರ್ ಹಾಗೂ ಕೋಟೆ ಗ್ರಾಮಗಳಿಗೆ ಮಾಜಿ ಶಾಸಕ ಸತೀಶ್ ಸೈಲ್ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.
ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಈ ಗ್ರಾಮಗಳ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಪ್ರಮುಖವಾಗಿ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು ಜನರು ಸುಮಾರು 3 ಕಿ.ಮೀ. ದೂರದಿಂದ ನೀರನ್ನು ತಂದು ಕುಡಿಯುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಶಾಲಾ – ಕಾಲೇಜಿಗೆ ಹೋಗಬೇಕಾದರೆ ಕಾರವಾರ, ಸಿದ್ಧರ ಮುಖಾಂತರ ಹೋಗಬೇಕಾಗುತ್ತದೆ. ಆದರೆ ಅಲ್ಲಿಯೂ ಸೂಕ್ತ ಬಸ್ ವ್ಯವಸ್ಥೆ ಇರುವುದಿಲ್ಲ. ಈ ಗ್ರಾಮಗಳಿಂದ ಸುಮಾರು 6 ಕಿ.ಮೀ. ನಡೆದು ಹೋಗಿ ಅಲ್ಲಿಂದ ಬಸ್ಸು ಹತ್ತಿಕೊಂಡು ಹೋಗಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಹಾಗು ಇಲ್ಲಿಯ ಜನರಿಗೆ ಇದೆ.
ಇದರಿಂದಾಗಿ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹೋಗಲಾಗದೇ ಹಾಗು ಜನರಿಗೆ ಕೋರ್ಟ್ , ಕಚೇರಿ ಇತರೇ ಕಾರ್ಯಗಳಿಗೆ ಹೋಗಲು ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಘಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಇನ್ನು ಸರಿಯಾದ ಬೀದಿ ದೀಪದ ವ್ಯವಸ್ಥೆ ಕೂಡ ಇಲ್ಲ. ನೆಟ್ವರ್ಕ್ ಸಮಸ್ಯೆಯೂ ಇದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹಾಗು ಈ ಕುಗ್ರಾಮದಲ್ಲಿ ಜನರಿಗೆ ಹಠಾತ್ ಆರೋಗ್ಯ ಸಮಸ್ಯೆ ಉಂಟಾದರೆ ಅತ್ಯಂತ ಗಂಭೀರ ಪರಿಸ್ಥಿತಿ ಎದುರಾಗುತ್ತದೆ ಇವೇ ಮೊದಲಾದ ಸಮಸ್ಯೆಗಳನ್ನು ಆಲಿಸಿದ ಸೈಲ್ ಅತ್ಯಂತ ಪ್ರಮುಖ ಹಾಗು ಮಾನವೀಯ ಈ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಜನರ ಬೇಡಿಕೆಯಂತೆ ಈ ಪ್ರದೇಶದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯರ ಸಂಕಷ್ಟಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಲು ವಿನಂತಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ರವೀಂದ್ರ ಅಮದಳ್ಳಿ, ರವಿಕಾಂತ ತಳೇಕರ, ಸಮೀಪ ಗೋಪಶಿಟ್ಟಾ, ಅಜಯ್ ಸಿಗ್ಗಿ, ಪರಶುರಾಮ ಚೌಹಾಣ್, ಸುರೇಶ ಹಳ್ಳೂರ ಮುಂತಾದವರು ಇದ್ದರು.