ಕಾರವಾರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.18 ರಂದು ಶಕ್ತಿ ಸಂಗಮ ಹೆಸರಿನಲ್ಲಿ ಬಿಜೆಪಿಯ ವಿವಿಧ ಪ್ರಕೋಷ್ಠಗಳ ರಾಜ್ಯ ಮಟ್ಟದ ಸಮಾವೇಶ ನಡೆಯಲಿದ್ದು, ಜಿಲ್ಲೆಯಿಂದ 350 ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೀನುಗಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಹೂವಾ ಖಂಡೇಕರ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಒಟ್ಟು 24 ಪ್ರಕೋಷ್ಠಗಳು ಇವೆ. ಪ್ರತೀ ಪ್ರಕೋಷ್ಠದಲ್ಲಿ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಹಲವು ಪದಾಧಿಕಾರಿಗಳು ಇರುತ್ತಾರೆ. ಸದ್ಯ ಸಮಾವೇಶಕ್ಕೆ ಪ್ರಕೋಷ್ಠದ ಪದಾಧಿಕಾರಿಗಳು ಮಾತ್ರ ಪಾಲ್ಗೊಳ್ಳುತ್ತಾರೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಬಳಿಕ ರಾಜ್ಯ ಮೀನುಗಾರರ ಪ್ರಕೋಷ್ಠದ ನೂತನ ಸದಸ್ಯರ ಪಟ್ಟಿ ಬಿಡುಗಡೆ ಮಾಡಿದರು.
ಜಿಲ್ಲೆಯ ಎಲ್ಲ ಪ್ರಕೋಷ್ಠಗಳ ಸಂಯೋಜಕ ರವಿ ಹೆಗಡೆ ಮಾತನಾಡಿ, ಪ್ರಕೋಷ್ಠದ ಮೂಲಕ ರಾಜ್ಯದ ಬಜೆಟ್ನಲ್ಲಿ ಏನು ಸೇರಿಸಬೇಕು ಎನ್ನುವ ಸಲಹೆ ನೀಡುವ ಅವಕಾಶ ಇದೆ. ಸದ್ಯ ಸಮಾವೇಶದಲ್ಲಿ ಪ್ರಕೋಷ್ಠಗಳು ಹೇಗೆ ಕೆಲಸ ಮಾಡಬೇಕು ಎನ್ನುವ ಸಲಹೆ ಸಿಗಲಿದೆ. ಬಳಿಕ ಜಿಲ್ಲೆಯ ಬೇಡಿಕೆ ತಿಳಿದು ಪಟ್ಟಿ ಮಾಡಲಾಗುತ್ತದೆ. ಸರಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಪ್ರಕೋಷ್ಠಗಳು ಕೆಲಸ ಮಾಡಲಿವೆ ಎಂದರು. ‘ಶಕ್ತಿ ಸಂಗಮ’ ಸಮಾವೇಶವನ್ನು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಉದ್ಘಾಟನೆ ಮಾಡಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ ಕುಮಾರ್ ಕಟೀಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಪಕ್ಷದ ಮುಖಂಡರು ಇರಲಿದ್ದಾರೆ ಎಂದರು.