ಶಿರಸಿ: ಒಂದೇ ಕುಟುಂಬದ ಐವರು ಕುಟುಂಬಸ್ಥರ ಎದುರು ಜಲ ಸಮಾಧಿಯಾದ ಘಟನೆ ತಾಲ್ಲೂಕಿನ ಭೈರುಂಬೆ ಸಮೀಪದ ಶಾಲ್ಮಲಾ ನದಿಯ ಭೂತನಗುಂಡಿ ಪ್ರದೇಶದಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಸಂಭವಿಸಿದೆ.
ಈ ಘಟನೆ ಇಂದು (ಡಿ. 17) ರಂದು ನಡೆದಿದ್ದು, ಶಿರಸಿ ನಗರದ ರಾಮನಬೈಲ್’ನ ಮಹಮದ್ ಸಲೀಂ (44), ಉಮರ್ ಸಿದ್ದೀಕ್ (14), ನಾಬಿಲ್ (22), ನಾದಿಯಾ ಶೇಖ್ (22) ಹಾಗೂ ಕಸ್ತೂರಬಾನಗರದ ಮಿಸಬಾ (21) ನೀರು ಪಾಲಾಗಿದ್ದಾರೆ.
ಈ ಘಟನೆ, ಕುಟುಂಬದ 20 ಜನ ಸದಸ್ಯರು ಸೇರಿ ಪಿಕ್ನಿಕ್ಗಾಗಿ ಶಾಲ್ಮಲಾ ನದಿ ಪಾತ್ರದ ಭೂತನಗುಂಡಿ ಎಂಬ ಪ್ರದೇಶಕ್ಕೆ ತೆರಳಿದ್ದ ವೇಳೆ ಸಂಭವಿಸಿದೆ. ನಾದಿಯಾ ಶೇಖ್ ಹಾಗೂ ನಾಬಿಲ್ ಎಂಬುವವರು ಆಕಸ್ಮಿಕವಾಗಿ ನೀರಲ್ಲಿ ಬಿದ್ದ ಸಂದರ್ಭದಲ್ಲಿ ಅವರನ್ನು ಉಳಿಸಲು ಸಮೀಪವಿದ್ದ ಸಲೀಂ, ಉಮರ್ ಹಾಗೂ ಮಿಸಬಾ ನೀರಿನ ಗುಂಡಿಗೆ ಧಾವಿಸಿದ್ದರು. ಯಾರಿಗೂ ಈಜು ಬರದ ಕಾರಣ ರಕ್ಷಣೆಗೆ ತೆರಳಿದವರೂ ಗುಂಡಿಯ ಆಳಕ್ಕೆ ಹೋಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಗಣೇಶ ಕೆ.ಎಲ್, ಸಿಪಿಐ ಪಿ. ಸೀತಾರಾಮ, ಪಿಎಸ್ಐ ಪ್ರತಾಪ, ಅಗ್ನಿ ಶಾಮಕದಳದ ಸಿಬ್ಬಂದಿ, ಗೋಪಾಲ ಗೌಡ ನೇತೃತ್ವದ ಲೈಫ್ ಗಾರ್ಡ್ ತಂಡ, ಸ್ಥಳೀಯ ಈಜುಗಾರರು ಆಗಮಿಸಿ ಕಾಣೆಯಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ.