ಕಾರವಾರ: ಚತುಷ್ಪಥ ಹೆದ್ದಾರಿಯಲ್ಲಿ ಔಷಧಿ ತುಂಬಿದ ಟಾಟಾ ಏಸ್ ವಾಹಕ್ಕೆ ಬೆಂಕಿ ತಗುಲಿ ಔಷಧಿ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಕಾರವಾರದಿಂದ ಹೊನ್ನಾವರ ಪಶು ಆಸ್ಪತ್ರೆಗೆ ಟಾಟಾ ಏಸ್ ವಾಹನದಲ್ಲಿ ಔಷಧಿ ಸಾಗಿಸಲಾಗುತ್ತಿತ್ತು. ಊಟದ ಸಮಯವಾದುದರಿಂದ ಚಾಲಕ ವಾಹನವನ್ನು ನಿಲ್ಲಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಾಂತಿಸಾಗರ ಹೊಟೇಲಿಗೆ ಊಟಕ್ಕೆ ತೆರಳಿದ್ದ. ಇದೇ ಸಮಯಕ್ಕೆ ಈ ವಾಹನದಲ್ಲಿ ಚಿಕ್ಕ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಇದನ್ನು ನೋಡಿದ ಚಾಲಕ ನಂದಿಸಲು ಪ್ರಯತ್ನಪಟ್ಟರೂ ಬೆಂಕಿ ಇನ್ನಷ್ಟು ಹೆಚ್ಚಾಗಿದೆ.
ಕೂಡಲೇ ಅಗ್ನಿ ಶಾಮಕ ಠಾಣೆಯವರಿಗೆ ಮಾಹಿತಿ ರವಾನಿಸಲಾಯಿತು. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಆಗಮಿಸಿ ಬೆಂಕಿ ಆರಿಸಲು ಪ್ರಯತ್ನಿಸಿದರು. ವಾಹನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಔಷದಿಗೆ ಬೆಂಕಿ ತಗುಲಿ ಏಕಾಏಕಿ ಬೆಂಕಿ ಉರಿದಿದೆ. ಅಗ್ನಿ ಶಾಮಕ ಠಾಣೆಯವರ ಆಗಮನದಿಂದ ವಾಹನಕ್ಕೆ ಅಷ್ಟೇನು ದೊಡ್ಡ ಪ್ರಮಾಣದ ಹಾನಿ ಆಗುವುದು ತಪ್ಪಿದೆ.