ಕಾರವಾರ: ಸಮುದ್ರದ ನಡುವೆ ಎಂಜಿನ್ ವೈಫಲ್ಯಗೊಂಡು ಆತಂಕದಲ್ಲಿದ್ದ ಕೇಂದ್ರ ಸರ್ಕಾರದ ಸಂಶೋಧನಾ ಹಡಗಿನ ಎಂಟು ವಿಜ್ಞಾನಿಗಳನ್ನೂ ಸೇರಿದಂತೆ 36 ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ. ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಚಲಿಸುತ್ತಿದ್ದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಸಂಶೋಧನಾ ಹಡಗು ಆರ್ವಿ ಸಿಂಧುವಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಸಿಬ್ಬಂದಿ ಪರೀಕ್ಷಿಸಿದಾಗ ಹಡಗಿನ ಇಂಜಿನ್ ವಿಫಲಗೊಂಡಿರುವುದು ತಿಳಿದುಬಂದಿದೆ.
ಹಡಗಿನಲ್ಲಿ ಒಟ್ಟು 36 ಮಂದಿ ಇದ್ದು, ಎಲ್ಲರೂ ಆತಂಕಿತರಾಗಿದ್ದರು. ತಕ್ಷಣ ಕೋಸ್ಟ್ಗಾರ್ಡ್ಗೆ ಅಪಾಯದ ಬಗ್ಗೆ ಸೂಚನೆ ರವಾನಿಸಲಾಯಿತು. ಹಡಗು ಸಂಕಷ್ಟದಲ್ಲಿರುವ ಬಗ್ಗೆ ಸೂಚನೆ ಕೋಸ್ಟ್ಗಾರ್ಡ್ ಸ್ವೀಕರಿಸಿ ಪರಿಶೀಲಿಸಿದಾಗ ಕಾರವಾರದಿಂದ 20 ನಾಟಿಕಲ್ ಮೈಲು ದೂರದಲ್ಲಿ ಹಡಗು ಕೆಟ್ಟು ನಿಂತಿರುವುದು ಗಮನಕ್ಕೆ ಬಂದಿದೆ.
ಆರ್ವಿ ಸಿಂಧು ಅತ್ಯಾಧುನಿಕ ಸಂಶೋಧನಾ ನೌಕೆಯಾಗಿದ್ದು, ಬೆಲೆಬಾಳುವ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಡಾಟಾಗಳನ್ನು ಹೊತ್ತೊಯ್ಯುತ್ತಿದ್ದರಿಂದ ಪರಿಸ್ಥಿತಿ ನಿರ್ಣಾಯಕವಾಗಿತ್ತು. ಅಲ್ಲದೇ ಹಡಗು ಸೂಕ್ಷ್ಮ ಕರಾವಳಿ ತೀರವಾದ ಕಾರವಾರಕ್ಕೆ ಸಮೀಪದಲ್ಲಿದ್ದು, ಒಂದು ವೇಳೆ ತೈಲ ಸೋರಿಕೆಯಂಥ ಅಘಡವೇನಾದರೂ ಸಂಭವಿಸಿದಲ್ಲಿ ವಿನಾಶಕಾರಿ ಮಾಲಿನ್ಯ ಉಂಟಾಗುವ ಸಾಧ್ಯತೆಯ ಇತ್ತು. ಇದನ್ನರಿತ ಭಾರತೀಯ ಕೋಸ್ಟ್ಗಾರ್ಡ್ ತಕ್ಷಣವೇ ಕಾರ್ಯಪ್ರವೃತ್ತವಾಗಿ, ಹೆಚ್ಚಿನ ಆದ್ಯತೆಯ ರಕ್ಷಣಾ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಿತು. ನುರಿತ ತಂಡದೊಂದಿಗೆ ತಮ್ಮ ಹೆಚ್ಚು ಸುಧಾರಿತ ಹಡಗನ್ನು ಅಪಾಯ ಉಂಟಾಗಿರುವ ಪ್ರದೇಶಕ್ಕೆ ರವಾನಿಸಿತು.
ಪ್ರತಿಕೂಲ ಹವಾಮಾನ ಪರಿಸ್ಥಿತಿ, ಕಡಲತೀರದಿಂದ ಕೂಡ ಅಪಾಯ ಉಂಟಾಗಿರುವ ಪ್ರದೇಶ ಸಾಕಷ್ಟು ದೂರದಲ್ಲಿರುವುದು ಹಾಗೂ ಆರ್ವಿ ಸಿಂಧು ಹಡಗಿನ ಗಾತ್ರ ಕೂಡ ಬೃಹತ್ತಾಗಿರುವುದು ಕೋಸ್ಟ್ಗಾರ್ಡ್ಗೆ ಸವಾಲಿನ ಕೆಲಸವಾದರೂ ತಂಡವು ಹಡಗನ್ನು ಸುರಕ್ಷಿತವಾಗಿ ಗೋವಾಕ್ಕೆ ತರಲು ಎಳೆದೊಯ್ಯಲು ತಡೆರಹಿತ ರಕ್ಷಣಾ ಕಾರ್ಯಾಚರಣೆ ನಡೆಸಿತು. ಕೊನೆಗೂ ಸಿಂಧು ಹಡಗಿನಲ್ಲಿದ್ದ ವಿಜ್ಞಾನಿಗಳು, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.