ಕಾರವಾರ: ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹಾಗೂ ಸಚಿವ ಶಿವರಾಮ ಹೆಬ್ಬಾರರ ನಡುವಿನ ಒಳಒಪ್ಪಂದ ಹಾಗೂ ಆರ್ಥಿಕ ಕಾರಣಕ್ಕಾಗಿ ಗೆಲ್ಲುವ ಅಭ್ಯರ್ಥಿಯನ್ನು ಬಿಟ್ಟು ಜೆಡಿಎಸ್ದಿಂದ ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸುವ ಕೃತ್ಯವನ್ನು ಮಾಡಿದ್ದಾರೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿರುವ ಸಂತೋಷ ಎಂ. ರಾಯ್ಕರ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ 20 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, 3 ಬಾರಿ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಟಿಕೆಟ್ ನೀಡದೆ ವಂಚಿಸಲಾಗಿದೆ. ಇದರಿಂದ ಬೇಸತ್ತು ಗಾಲಿ ಜನಾರ್ಧನ ರೆಡ್ಡಿಯವರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷದಿಂದ ಟಿಕೆಟ್ ಸಹ ನೀಡಿದ್ದಾರೆ ಎಂದರು.
ಗಾಲಿ ಜನಾರ್ಧನ ರೆಡ್ಡಿಯವರು ನನ್ನ ಮೇಲೆ ಭರವಸೆ ಇಟ್ಟು ಪಕ್ಷದ ಟಿಕೇಟ್ ನೀಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಬರೀ ಒಂದೇ ಸ್ಥಾನದಲ್ಲಿ ಪಕ್ಷದ ವತಿಯಿಂದ ನಾನು ಸ್ಪರ್ಧಿಸುತ್ತಿದ್ದರೂ, ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ, ಗೆಲ್ಲಿಸಿ ತರುತ್ತೆವೆ. ಸದ್ಯ ಕ್ಷೇತ್ರದಲ್ಲಿ ನನ್ನ ಪರ ವಾತಾವರಣ ಮಾಡಿದ್ದು, ಜೆಡಿಎಸ್ ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಸಾಮೂಹಿಕ ರಾಜಿನಾಮೆ ನೀಡಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಬಹುತೇಕ ಮೇ 2 ಇಲ್ಲವೇ 3 ರಂದು ಸ್ವತಃ ಗಾಲಿ ಜನಾರ್ಧನ ರೆಡ್ಡಿಯವರು ನನ್ನ ಪರ ಪ್ರಚಾರ ಮಾಡಲು ಕ್ಷೇತ್ರಕ್ಕೆ ಬರಲಿದ್ದು, ಮುಂಡಗೋಡಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಪಕ್ಷದ ಮುಖಂಡ ಸಂದೇಶ ರಾಯ್ಕರ ಮಾತನಾಡಿ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಜನಸಂಖ್ಯೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದರೂ, ರಾಜಕೀಯ ಪ್ರಾತಿನಿಧ್ಯ ಮಾತ್ರ ದೊರಕುತ್ತಿಲ್ಲ. ಈ ಬಾರಿ ಯಲ್ಲಾಪುರ ಕ್ಷೇತ್ರದಿಂದ ನಮ್ಮ ಸಮಾಜದ ಅಭ್ಯರ್ಥಿಯನ್ನು ನಿಲ್ಲಿಸಲಾಗಿದ್ದು, ಎಲ್ಲರ ಸಹಕಾರದಿಂದ ಚುನಾವಣೆಯಲ್ಲಿ ಗೆಲ್ಲಿಸುತ್ತೆವೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಹಿಂದಿನ ತಾಲೂಕಾಧ್ಯಕ್ಷ ತುಕಾರಾಮ ಗುಡಕರ ಮಾತನಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಇದ್ದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಇಚ್ಛಾಶಕ್ತಿ ಪಕ್ಷದ ವರಿಷ್ಠರಿಗೆ ಇಲ್ಲ. ಅದಕ್ಕಾಗಿ ಪ್ರತಿ ಚುನಾವಣೆಯಲ್ಲೂ ಹೊರಗಿನಿಂದ ತಂದ ಅಭ್ಯರ್ಥಿಯನ್ನು ಹಾಕಲಾಗುತ್ತದೆ. ಪಕ್ಷದ ನಡವಳಿಕೆಗೆ ಬೇಸತ್ತು ಈ ಬಾರಿ ಜೆಡಿಎಸ್ ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಪಕ್ಷಕ್ಕೆ ರಾಜಿನಾಮೆ ಕೊಟ್ಟು, ಸಂತೋಷ ರಾಯ್ಕರನ್ನು ಬೆಂಬಲಿಸಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆವೆ. ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಇಸಾಕ ಅಹ್ಮದ್, ಬಸವರಾಜ ಬಡಿಗೇರ, ಅಜರ ಶೇಖ್, ಅಬ್ದುಲ್ ಇಸಾಕ್, ದೀಪಾ ರೇವಣಕರ್, ಬಸವರಾಜ, ಆಶಾ ರಾಯ್ಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.