ಉತ್ತರ ಕನ್ನಡ: ಶ್ರೀ ಮೂಕಾಂಬಿಕಾ ಭಾರತ್ ಗ್ಯಾಸ್ ಏಜೆನ್ಸಿಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಮಣ್ಕುಳಿ ಪುಷ್ಪಾಂಜಲಿ ಕ್ರಾಸ್ ಸಮೀಪದಲ್ಲಿರುವ ಗ್ಯಾಸ್ ಏಜೆನ್ಸಿಯಲ್ಲಿ ನಡೆದಿದೆ.
ಮೂವರು ಮುಸುಕುಧಾರಿಗಳು ಬಾಗಿಲು ಒಡೆದು 5 ಲಕ್ಷ ರೂಪಾಯಿಗೂ ಅಧಿಕ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಎಂದಿನಂತೆ ಏಜೆನ್ಸಿ ಮಾಲೀಕರು ತಮ್ಮ ದಿನನಿತ್ಯದ ವ್ಯವಹಾರದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ನಿನ್ನೆ ಕೆಲಸದ ಒತ್ತಡದಿಂದ ಹಣವನ್ನು ತಮ್ಮ ಗ್ಯಾಸ್ ಏಜೆನ್ಸಿ ಅಂಗಡಿಯಲ್ಲೇ ಇಟ್ಟು ಬಾಗಿಲು ಹಾಕಿ ತೆರಳಿದ್ದರು. ಇಂದು ನಸುಕಿನ ಜಾವ ಮೂವರು ಕಳ್ಳರು ಮುಸುಕು ಹಾಗೂ ಕೈಗೆ ಗ್ಲೌಸ್ ಧರಿಸಿ ಗ್ಯಾಸ್ ಏಜೆನ್ಸಿಯ ಬೀಗ ಮುರಿದು ಒಳ ನುಗ್ಗಿದ್ದಾರೆ.