ಕಾರವಾರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (90) ವಯೋ ಸಹಜತೆಯ ಅನಾರೋಗ್ಯದಿಂದ ಅಸ್ತಂಗತರಾದರು. ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಟೋಳಿ ಗ್ರಾಮದವರಾದ ಮಹಾದೇವ ವೇಳಿಪ ಅವರು ಜನಪದ ಕಲೆ ಹಾಗೂ ಪರಿಸರ ರಕ್ಷಣೆಗೆ ಜಾನಪದ ರಾಜ್ಯ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ನೂರಾರು ಬಗೆಯ ಗೆಡ್ಡೆ ಗೆಣಸುಗಳನ್ನು ಉಳಿಸಿ ಬೆಳಸುವ ಜೊತೆ ಅರಣ್ಯ ಸಂರಕ್ಷಣೆ ಸಹ ಮಾಡಿದ್ದ ವೇಳಿಪ ಅವರು, ಜನಪದ ಹಾಡುಗಳನ್ನು ಸಾವಿರ ಲೆಕ್ಕದಲ್ಲಿ ನಿರಂತರ ಹಾಡುತ್ತಿದ್ದರು. ಪರಿಸರದ ಬಗ್ಗೆ ಅಪಾರ ಜ್ಞಾನ, ಕಾಳಜಿ ಹೊಂದಿದ್ದ ಅವರ ಸಾಧನೆಗೆ 2021ರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸರಕಾರ ಗೌರವಿಸಿದೆ.
ಕೃಷಿಕರಾಗಿದ್ದ ಅವರು ಹಲವು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸಿ ಉಳಿಸುವ ಕಾರ್ಯ ಮಾಡಿದ್ದಾರೆ. ಹಕ್ಕಿಗಳ ಕೂಗನ್ನು ಆಧರಿಸಿ ಯಾವ ಪಕ್ಷಿ ಎಂದು ನಿಖರವಾಗಿ ಹೇಳುತ್ತಿದ್ದರು. ವೇಳಿಪ ಅವರು ಅಪಾರ ಬಂಧು-ಬಳಗ ಅಗಲಿದ್ದಾರೆ.