ಶಿರಸಿ(ಮಾ.04) : ರಾಜ್ಯದ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದೇವೆಯೇ ಹೊರತು ಟಿಕೆಟ್ಗಾಗಿ ಅಲ್ಲ. ಪಕ್ಷಕ್ಕೆ ದುಡಿಯುತ್ತೇವೆ ಟಿಕೆಟ್ ಪಕ್ಷ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು. ಗುರುವಾರ ನಗರಕ್ಕೆ ಆಗಮಿಸಿದ್ದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಆಡಳಿತ ವೈಖರಿ, ಬೆಲೆ ಏರಿಕೆಯಿಂದ ಜನ ಬೇಸತ್ತು ಬದಲಾವಣೆ ಬಯಸಿದ್ದಾರೆ. ಈಗಿನ ವಾತಾವರಣ ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿಯ ವಿರುದ್ಧ ಜನಸಾಮಾನ್ಯರೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ 60 ವರ್ಷದಲ್ಲಿ ಮಾಡಿದ್ದನ್ನು ಬಿಜೆಪಿಯವರು ಏಳು ವರ್ಷದಲ್ಲಿ ಹರಾಜು ಹಾಕಿದರು ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ. ಕಾಂಗ್ರೆಸ್ ಹೋರಾಟದ ಮೂಲಕ ಅಧಿಕಾರಕ್ಕೆ ಬರಲಿದೆ. ಅದಕ್ಕೆ ಪಕ್ಷವನ್ನು ಸಂಘಟನೆಯನ್ನು ಮಾಡುತ್ತಿದ್ದೇವೆ. ಇದರ ಜತೆಯಲ್ಲಿ ಜನರ ಭಾವನೆಯೂ ಬದಲಾವಣೆಯಾಗಿರುವುದು ಗಮನಾರ್ಹ ಎಂದರು.
ಕಾಂಗ್ರೆಸ್ ಯಾವುದೇ ಕಾರ್ಯಕ್ರಮ ಕೊಟ್ಟರೂ ಸಾರ್ವಜನಿಕರ ಅನುಕೂಲಕ್ಕೆ ಕೊಡುತ್ತಾ ಬಂದಿದೆ. ಯಾವುದೇ ವ್ಯಕ್ತಿಗೆ, ಯಾವುದೇ ಧರ್ಮಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ನೀಡಿಲ್ಲ. ಆದರೀಗ ಧರ್ಮ ಒಡೆಯುವ, ಜಾತಿಜಾತಿ ಒಡೆಯುವ ಕೆಲಸ ಆಗುತ್ತಿದೆ. ಇದು ಯಾವುದೇ ಕಾರಣಕ್ಕೂ ಶೋಭೆ ತರುವುದಿಲ್ಲ ಎಂದರು.
ಹಲವರು ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡಿ ಜೀವನ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸಾಕಷ್ಟುಅರ್ಜಿ ಇದೆ. ಆದರೆ, ಅತಿಕ್ರಮಣದಾರರಿಗೆ ರಕ್ಷಣೆ ಕೊಡುತ್ತಿಲ್ಲ. ಅತಿಕ್ರಮಣ ಸಕ್ರಮ ಮಾಡುವುದಕ್ಕೆ ಮೀನಮೇಷ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸಂಸದರಿಗೆ ಮಾತನಾಡುವ ಬಾಯಿಯಿಲ್ಲ. ಅವರು ಸ್ವಂತ ಶಕ್ತಿಯಿಂದ ಗೆದ್ದವರಲ್ಲ. ಅವರೆಲ್ಲಾ ಮೋದಿ ಹೆಸರಿನಲ್ಲಿ ಗೆದ್ದಿದ್ದರಿಂದ ಅವರ ಮುಂದೆ ಹೋಗಿ ಮಾತನಾಡುತ್ತಿಲ್ಲ. ಕಾನೂನು ಬದಲಾವಣೆ ಆಗಬೇಕು. ಅನಗತ್ಯವಾದ ಕೆಲವು ದಾಖಲೆಗಳನ್ನು ಕೈಬಿಡಬೇಕು. ಮೂರು ತಲೆಮಾರು ಅಂದರೆ ಅಂಥ ದಾಖಲೆ ನೀಡುವುದು ಕಷ್ಟಎಂದರು.