ಕಾರವಾರ: 1971ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿರುವುದಕ್ಕೆ 50ನೇ ವರ್ಷದ ಸಂಭ್ರದ ಹಿನ್ನೆಲೆ ದೇಶದಾದ್ಯಂತ ಸಂಚರಿಸುತ್ತಿರುವ ಸ್ವರ್ಣಿಮ್ ವಿಜಯ್ ವರ್ಷ್ ಜ್ಯೋತಿಯು ಸೆ.17ರಂದು ಕಾರವಾರ ನೌಕಾನೆಲೆಗೆ ತಲುಪಿತು.
ನೌಕಾನೆಲೆಯ ಯುದ್ಧ ಸ್ಮಾರಕದ ಆವರಣದಲ್ಲಿ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಜ್ಯೋತಿಯನ್ನು ಪರೇಡ್ ಮೂಲಕ ಬರಮಾಡಿಕೊಂಡರು.
ನಂತರ ವರದಿಗಾರರೊಂದಿಗೆ ಮಾತಾನಾಡಿ, ವಿಜಯ ಜ್ಯೋತಿಯು ಸೆ.24ರವರೆಗೆ ಕಾರವಾರದಲ್ಲಿ ಇರಲಿದ್ದು ಸೆ.21ರಂದು ಯುದ್ಧ ವಿಮಾನ ವಾಹಕ ನೌಕೆ ಐ.ಎನ್.ಎಸ್. ವಿಕ್ರಮಾದಿತ್ಯದ ಮೇಲೆ, ವಿವಿಧ ಶಾಲೆಗಳು, ಕಾರವಾರದ ಎನ್.ಸಿ.ಸಿ. ಘಟಕದ ಕಚೇರಿಯಲ್ಲಿ ಸಮಾರಂಭ ನಡೆಯಲಿದೆ.
ವರ್ಷಪೂರ್ತಿ ನಡೆಯಲಿರುವ ವಿಜಯೋತ್ಸವಕ್ಕೆ ಕಳೆದ ವರ್ಷ ಡಿ.16ರಂದು ಪ್ರಧಾನಿ ನರೇಂದ್ರ ಮೋದಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ್ದರು.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಉರಿಯುತ್ತಿರುವ ಜ್ಯೋತಿಯಿಂದಲೇ ಇದನ್ನು ಬೆಳಗಿದ್ದು ವಿಶೇಷವಾಗಿದೆ. ವಿಜಯ ಜ್ಯೋತಿ ಯಾತ್ರೆಯು ದೇಶದ ಉದ್ದಗಲಕ್ಕೆ ಸಂಚರಿಸಲಿದ್ದು, ಡಿ.15ರಂದು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯಲ್ಲಿ ವಿಲೀನವಾಗುವ ಮೂಲಕ ಸಮಾರೋಪಗೊಳ್ಳಲಿದೆ ಎಂದರು.
ಸ್ವರ್ಣಿಮ್ ವಿಜಯ್ ವರ್ಷ’ದ ಅಂಗವಾಗಿ 2020ರ ಡಿಸೆಂಬರ್ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಬೆಳಗಿದ್ದ `ವಿಜಯ ಜ್ಯೋತಿ’ಯು ಶುಕ್ರವಾರ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆ ಆಗಮಿಸಿತು. ನೌಕಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜ್ಯೋತಿಯನ್ನು ಗೌರವಯುತವಾಗಿ ಸ್ವಾಗತಿಸಿಕೊಂಡರು.