ಉಡುಪಿ: ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಯುವತಿಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎನ್ನಲಾದ ಘಟನೆಯನ್ನು ಖಂಡಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಗರದ ಜೋಡುಕಟ್ಟೆಯಿಂದ ಕೃಷ್ಣಮಠದ ಪಾರ್ಕಿಂಗ್ ಆವರಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಮೆರವಣಿಗೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ರಾಜ್ಯ ಸರಕಾರ ಹಾಗೂ ಪೊಲೀಸರ ನಡೆಗೆ ದಿಕ್ಕಾರ ಕೂಗಿದರು. ಕೂಡಲೇ ತಪ್ಪಿತಸ್ಥ ಯುವತಿಯರ ವಿರುದ್ಧ ಕ್ರಮ ಕೈಗೊಂಡು, ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಮೆರವಣಿಗೆಯೂ ಜೋಡುಕಟ್ಟೆಯಿಂದ ಆರಂಭಗೊಂಡು, ಕೋರ್ಟ್ ರೋಡ್, ಕಲ್ಪನಾ ಸರ್ಕಲ್, ಅಲಂಕಾರ್ ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಸಾಗಿ ಬಂದು ಕೃಷ್ಣಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಮುಕ್ತಾಯಗೊಂಡಿತು.