ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಿಂದ 150 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿ ಠೇವಣಿದಾರರು ಇಂದು ನಗರದ ಸಂಸ್ಕೃತ ಕಾಲೇಜಿನ ಮುಂಭಾಗದ ಸೊಸೈಟಿಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಮಧ್ಯೆ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಅವಮಾನ ತಾಳಲಾರದೆ ಕಣ್ಣೀರು ಇಡುತ್ತಾ ತನ್ನ ಬ್ಯಾಗ್ ನಲ್ಲಿದ್ದ ಕೆಲವು ಮಾತ್ರೆಯನ್ನು ಬಾಯಿಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಠೇವಣಿದಾರರು ಆಕೆಯನ್ನು ತಡೆದು ಬಾಯಿಯಲ್ಲಿದ್ದ ಮಾತ್ರೆಯನ್ನು ಉಗುಲಿಸಿ ಹೊರತೆಗೆಯುವ ಮೂಲಕ ಭಾರೀ ಅನಾಹುತವೊಂದನ್ನು ತಪ್ಪಿಸಿದರು.
ಸಂಘದ ಅಧ್ಯಕ್ಷರ ವಿರುದ್ಧ ಠೇವಣಿದಾರರು ದಿಕ್ಕಾರ ಕೂಗಿದರು. ಅಧ್ಯಕ್ಷರು ತಕ್ಷಣವೇ ಕಚೇರಿಗೆ ಬರುವಂತೆ ಪಟ್ಟುಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಠೇವಣಿದಾರರನ್ನು ಸಮಾಧಾನ ಪಡಿಸಿ, ಕಾನೂನಾತ್ಮಕವಾಗಿ ದೂರು ನೀಡುವಂತೆ ಸೂಚಿಸಿದರು. ಅದರಂತೆ ಠೇವಣಿದಾರರು ಠಾಣೆಗೆ ತೆರಳಿ ದೂರು ದಾಖಲಿಸಿದರು.