ಉಡುಪಿ: ಮಂಗಳೂರಿನ ವಕೀಲ ಕುಲದೀಪ್ ಶೆಟ್ಟಿ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸ್ಐ ಮತ್ತು ಇತರ ಪೊಲೀಸರು ನಡೆಸಿದ ಅಮಾನುಷ ಹಲ್ಲೆಯನ್ನು ಖಂಡಿಸಿ ಉಡುಪಿ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಇಂದು ಉಡುಪಿ ಕೋರ್ಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ವಕೀಲರು ಪೊಲೀಸರ ದೌರ್ಜನ್ಯ ಖಂಡಿಸಿ ಘೋಷಣೆ ಕೂಗಿದರು. ತಪ್ಪಿತಸ್ಥ ಪೊಲೀಸರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಮಾತನಾಡಿ, ವಕೀಲ ಕುಲದೀಪ್ ಶೆಟ್ಟಿ ಅವರನ್ನು ಅಮಾನುಷವಾಗಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಂಧಿಸುವಾಗ ಯಾವುದೇ ಕಾನೂನು ಪಾಲಿಸಿಲ್ಲ. ಒಂದು ರೀತಿಯ ಸರ್ವಾಧಿಕಾರಿಗಳಂತೆ ಪೊಲೀಸರು ವರ್ತಿಸಿದ್ದಾರೆ. ಇದು ಖಂಡನೀಯ. ಪೂರ್ವಪರ ವಿಚಾರಣೆ ನಡೆಸದೆ ಏಕಾಏಕಿಯಾಗಿ ಬಂಧನ ಮಾಡಿರುವುದು ಅಕ್ಷಮ್ಯ ಅಪರಾಧ. ಇದನ್ನು ಎಲ್ಲ ವಕೀಲರು ತೀವ್ರವಾಗಿ ಖಂಡಿಸಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್, ಉಪಾಧ್ಯಕ್ಷ ದಿನೇಶ್ ಬಿ. ಶೆಟ್ಟಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ಕಾರ್ಯದರ್ಶಿ ಶ್ರೀಧರ ಕಜೆ, ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ, ಎ. ಸಂಜೀವ, ಪ್ರದೀಪ್ ರಾವ್, ಶಾಂತಾರಾಮ್ ಶೆಟ್ಟಿ, ಆನಂದ ಮಡಿವಾಳ ಮೊದಲಾದವರು ಇದ್ದರು.