ಉಡುಪಿ: ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ದೂರದ ಸಂಬಂಧಿಕರು ಬರುವರೆಗೆ ಶವ ರಕ್ಷಿಸಿಡಲು ಸ್ಥಳಾವಕಾಶದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಮ್ಮ ಮನೆಯಲ್ಲಿಯೇ ಮೃತದೇಹ ರಕ್ಷಿಸಿಡಲು ಅವಕಾಶ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿಯ 42ವರ್ಷದ ಸ್ವಪ್ನ ಮೃತಪಟ್ಟ ಮಹಿಳೆ. ಇವರು, ಮೂಡುಬಿದಿರೆಯಲ್ಲಿ ನಡೆಯುತ್ತಿದ್ದ ಯಕ್ಷಗಾನದಲ್ಲಿ ಮಗಳ ಪಾತ್ರ ನೋಡಲೆಂದು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಶಿರ್ವ ಬಳಿ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಶಿರ್ವ ಪೋಲಿಸ್ ಠಾಣೆಯ ಎಸ್.ಐ ರಾಘವೇಂದ್ರ, ಎ.ಎಸ್.ಐ. ಕೃಷ್ಣ ಆಚಾರ್ಯ, ಎ.ಎಸ್.ಐ ಶ್ರೀಧರ ಆಚಾರ್ಯ, ಕಾನೂನು ಪ್ರಕ್ರಿಯೆ ನಡೆಸಿದರು. ಸಂಚಾರಿ ಪೋಲಿಸ್ ಠಾಣಾಧಿಕಾರಿ ಸಕ್ತಿವೇಲು ಸಹಕರಿಸಿದರು. ಮೃತರ ಸಂಬಂಧಿಕರು ಉಡುಪಿಯಲ್ಲಿ ಅಂತ್ಯಸಂಸ್ಕಾರ ನಡೆಸಿದರು.