ಉಡುಪಿ: ನಮ್ಮ ಪ್ರದೇಶ ಭವಿಷ್ಯದಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಎಲ್ಲ ಜಾತಿ ಧರ್ಮದ ಜನರು ಒಂದೇ ತಾಯಿ ಮಕ್ಕಳಂತೆ ಜೀವನ ಮಾಡಿಕೊಂಡು, ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಉಡುಪಿ ಜಯಶ್ರೀಕೃಷ್ಣ ಪರಿಸರ ಸಮಿತಿ ವತಿಯಿಂದ ಮಣಿಪಾಲ ಫಾರ್ಚುನ್ ಇನ್ ವ್ಯಾಲಿ ವ್ಯೂ ಹೊಟೇಲ್ನ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ಕೈಗಾರಿಕೆಗಳಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದ ಕುರಿತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಪರವೂರಿನ ಜನರು ಇಲ್ಲಿಗೆ ಬಂದು ತಮ್ಮ ಕಿಸೆಯಿಂದ ಹಣ ಖರ್ಚು ಮಾಡಿದರೆ ಮಾತ್ರ ಇಲ್ಲಿನ ಪ್ರದೇಶ ಅಭಿವೃದ್ಧಿ ಆಗುತ್ತದೆ. ಅವರು ಇಲ್ಲಿಗೆ ಬರುವ ವಾತಾವರಣ ಸೃಷ್ಟಿಸುವ ಕೆಲಸ ಇಲ್ಲಿನ ಜನರದ್ದು. ಅತ್ಯಂತ ಸೌಹಾರ್ದ, ಶಾಂತಿ, ನೆಮ್ಮದಿಯ ವಾತಾವರಣ ನಿರ್ಮಾಣ ಮಾಡುವುದು ಜನರ ಜವಾಬ್ದಾರಿ. ಸೌಹಾರ್ದ, ನೆಮ್ಮದಿಯ ವಾತಾವರಣ ಇದ್ದಾಗ ಮಾತ್ರ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಾರೆ. ಉದ್ಯಮಿಗಳು ಶಾಂತಿ, ಸಾಮರಸ್ಯವನ್ನು ನೋಡಿಕೊಂಡು ದುಡ್ಡು ಹಾಕ್ತಾರೆ. ಹಾಗಾಗಿ ಸಾಮರಸ್ಯ, ಶಾಂತಿ, ಸೋದರತೆಯ ಸಮಾಜ ನಿರ್ಮಾಣ ಮಾಡಲು ಎಲ್ಲ ವರ್ಗದ ಜನರು ಒಂದಾಗಬೇಕು ಎಂದರು.
ಆರ್ಥಿಕ ಚಲವನೆ ಇಲ್ಲದಿದ್ದರೆ ಯಾವುದೇ ಪ್ರದೇಶ ಅಭಿವೃದ್ಧಿ ಆಗುವುದಿಲ್ಲ. ನಮ್ಮವರೇ ಎಷ್ಟೇ ಖರ್ಚು ಮಾಡಿದರೂ ಅದರಿಂದ ಸಂಪೂರ್ಣ ಅಭಿವೃದ್ಧಿ ಸಾಧ್ಯವಿಲ್ಲ. ಬೇರೆ ಬೇರೆ ಊರುಗಳಿಂದ ಜನರು ಇಲ್ಲಿಗೆ ಬಂದು ಖರ್ಚು ಮಾಡಿದಾಗ ಇಲ್ಲಿನ ವ್ಯಾಪರಿಗಳಿಗೆ ದುಡ್ಡು ಆಗುತ್ತದೆ. ಆಗ ತನ್ನಿಂದ ತಾನಾಗಿಯೇ ಆರ್ಥಿಕ ಚಲವನೆ ಹೆಚ್ಚಾಗಿ ಆ ಪ್ರದೇಶ ಭವಿಷ್ಯದಲ್ಲಿ ಅಭಿವೃದ್ಧಿ ಕಾಣುತ್ತದೆ. ಈ ಆಲೋಚನೆ ಪ್ರತಿಯೊಬ್ಬರಿಗೂ ಬರಬೇಕು ಎಂದು ಹೇಳಿದರು.
ಅಭಿವೃದ್ಧಿ ಪರಿಸರಕ್ಕೆ ಮಾರಕವಾಗಿ ಸಮಾಜಕ್ಕೆ ತೊಂದರೆ ಆಗಬಾರದು.
ಪರಿಸರ ಸಂರಕ್ಷಣೆ ನೆಪದಲ್ಲಿ ಅಭಿವೃದ್ದಿ ಕೂಡ ಕುಂಠಿತ ಆಗಬಾರದು. ಯಾವುದೇ ಅಭಿವೃದ್ಧಿ ಭವಿಷ್ಯದ ಪೀಳಿಗೆಗೆ ಪ್ರಯೋಜನವಾಗಿರಬೇಕು. ಮುಂದಿನ ಪೀಳಿಗೆಗೆ ಉತ್ತಮ ಸಮಾಜ ಹಾಗೂ ಪರಿಸರವನ್ನು ಬಿಟ್ಟುಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಅಭಿವೃದ್ಧಿ ಹಾಗೂ ಪರಿಸರ ಜೊತೆಜೊತೆಯಾಗಿ ಹೋಗುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.