ಉಡುಪಿ: ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗನೊಂದಿಗೆ ಅಲ್ಲಿನ ಸಿಬ್ಬಂದಿ ಅನುಚಿತ ವರ್ತನೆ ತೋರಿದ್ದು ತಪ್ಪು. ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಉಡುಪಿಯಲ್ಲಿಂದು ಮಾತನಾಡಿದ ಅವರು, ಟೆಂಡರ್ ಷರತ್ತುಗಳಲ್ಲಿ ಪ್ರವಾಸಿಗರ ಕ್ಯಾಮರಾಗಳಿಗೆ ಶುಲ್ಕ ವಿಧಿಸಬೇಕೆಂದು ಉಲ್ಲೇಖಿಸಲಾಗಿದೆ. ಅದು ಟೆಂಡರ್ ವಹಿಸಿಕೊಂಡ ಗುತ್ತಿಗೆದಾರರ ಆದಾಯದ ಒಂದು ಭಾಗ ಕೂಡ ಆಗಿದೆ. ಆದ್ರೆ, ಟೆಂಡರ್ ಷರತ್ತುಗಳನ್ನು ತೆಗೆಯಬೇಕೆಂದು ನಾನು ಮತ್ತು ಜಿಲ್ಲಾಧಿಕಾರಿ ಈಗಾಗಲೇ ಚರ್ಚೆ ನಡೆಸಿದ್ದೇವೆ. ಪ್ರವಾಸಿಗರು, ಬ್ಲಾಗರ್ ಗಳು ಬಂದು ಪೋಟೊ, ವಿಡಿಯೋಗಳನ್ನು ತೆಗೆದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಹೆಚ್ಚು ಪ್ರಚಾರ ಸಿಗುತ್ತದೆ. ಅಲ್ಲದೆ, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಇದು ಸಹಕಾರಿ ಕೂಡ ಆಗಿದೆ. ಹಾಗಾಗಿ ಟೆಂಡರ್ ಷರತ್ತುಗಳನ್ನು ಮರುಪರಿಶೀಲಿಸಿ, ಕ್ಯಾಮರಾಗಳಿಗೆ ಶುಲ್ಕ ವಿಧಿಸುವ ಷರತ್ತು ಸೇರಿದಂತೆ ಕೆಲ ಷರತ್ತುಗಳನ್ನು ಕೈಬಿಟ್ಟು ತಿದ್ದುಪಡಿ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು.