ಉಡುಪಿ: ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜನಜಾಗೃತಿಗಾಗಿ ಸ್ವೀಪ್ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಮ್ಯಾಂಗ್ರೋವ್ ಕಾಡುಗಳ ಮೂಲಕ ದೋಣಿ ವಿಹಾರ ನಡೆಸಿ ಜನಜಾಗೃತಿ ಮೂಡಿಸಲಾಯಿತು.
ಉಡುಪಿ ಜಿಲ್ಲಾಡಳಿತ ಸ್ವೀಪ್ ಸಮಿತಿ ವತಿಯಿಂದ ಸಾಲಿಗ್ರಾಮ ಪಾರಂಪಳ್ಳಿಯ ಬ್ರಿಜ್ ಸಮೀಪ ಕಯಾಕಿಂಗ್ ನಡೆಸುತ್ತಿರುವ ಮಿಥುನ್ ಮೆಂಡನ್, ಲೋಕೇಶ್ ಮೆಂಡನ್ ನೇತೃತ್ವದಲ್ಲಿ ಕಯಾಕಿಂಗ್ ಮೂಲಕ ಮತದಾನ ಮಹತ್ವ ಅರಿವು ಮೂಡಿಸಲಾಯಿತು. ಕಯಾಕಿಂಗ್ ಪಾಯಿಂಟ್ ಬಳಿ ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ, ಪ್ರೊಬೆಷನರಿ ಐಎಎಸ್ ಯತೀಶ್ ಕಯಾಕಿಂಗ್ ಪಾಯಿಂಟ್ ಬಳಿ ತುಳುನಾಡಿನ ಸಾಂಪ್ರದಾಯಿಕ ಅಡಕೆ ಮುಟ್ಟಾಳೆ ಧರಿಸಿ ಮತದಾನ ಪ್ರತಿಜ್ಞೆ ಕುರಿತು ಫಲಕದಲ್ಲಿ ಸಹಿ ಮಾಡಿ ಸುರಕ್ಷತಾ ಉಪಕರಣ ಧರಿಸಿ ಕಯಾಕಿಂಗ್ ಆರಂಭಿಸಿದರು. 30 ನಿಮಿಷಗಳ ಕಾಲ ಮ್ಯಾಂಗ್ರೋವ್ ಕಾಡುಗಳಲ್ಲಿ 40ಕ್ಕೂ ಹೆಚ್ಚು ಕಯಾಕ್ ದೋಣಿಗಳ ಮೂಲಕ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭ ಮಣೂರು ಪಡುಕರೆ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿ ಮತದಾನ ದಿನಾಂಕ ಒಳಗೊಂಡ ಬಲೂನ್ ಹಾರಿಬಿಡಲಾಯಿತು.