ಉಡುಪಿ: ಜಿಲ್ಲೆಯ ವಿವಿಧೆಡೆ ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಿಡೀರ್ ದಾಳಿ ನಡೆಸಿ ಕೆ.ಪಿ.ಎಂ.ಇ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಲ್ಯಾಬ್ ಹಾಗೂ ಕ್ಲಿನಿಕ್ಗಳನ್ನು ಸೀಜ್ ಮಾಡಿದ್ದಾರೆ.
ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್ನಲ್ಲಿ ಡಾ. ಎ. ಆರ್. ಆಚಾರ್ಯ ಆಯುರ್ವೇದ ಕ್ಲಿನಿಕ್ನಲ್ಲಿ ಅಲೋಪತಿಕ್ ಪದ್ಧತಿಯ ಚಿಕಿತ್ಸೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡವು ಪ್ರಕರಣ ದಾಖಲಿಸಿಕೊಂಡಿದೆ.
ಅಲೋಪತಿಕ್ ಪದ್ಧತಿ ಚಿಕಿತ್ಸೆ ನೀಡುತ್ತಿದ್ದ ನಾವುಂದದ ನಂಬಿಯಾರ್ ಕ್ಲಿನಿಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪರವಾನಿಗೆ ಇಲ್ಲದೆ ನಡೆಸುತ್ತಿದ್ದ ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್ ಅನ್ನು ಸೀಝ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಆರೂರಿನಲ್ಲಿ ಸಂದೇಶ್ ರಾವ್ ಪರವಾನಿಗೆ ಇಲ್ಲದೆ ಕ್ಲಿನಿಕ್ನ್ನು ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ನ್ನು ಸೀಜ್ ಮಾಡಿ, ಪ್ರಕರಣ ದಾಖಲಾಗಿದೆ. ಕುಂದಾಪುರದ ಬಯೋಲಿನ್ ಲ್ಯಾಬ್ ನಲ್ಲಿ ರಾಜ್ಯದ ನೋಂದಾವಣೆ ಪ್ರಮಾಣ ಪತ್ರವನ್ನು ಹೊಂದಿರದವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕರು ಜಾಗೃತೆ ವಹಿಸಿ ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೊಂದಾವಣೆಯಾಗಿರದ ಅಥವಾ ನಕಲಿ ವೈದ್ಯರುಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಾರದು. ನಕಲಿ ವೈದ್ಯರ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಮೊ.ನಂ. 8277505911, ಕಾರ್ಕಳ ಮೊ.ನಂ. 8277505892 ಅಥವಾ ಉಡುಪಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದೂ.ಸಂಖ್ಯೆ: 0820-2525566, 2536650 ಅನ್ನು ಸಂಪರ್ಕಿಸಬಹುದಾಗಿದೆ.