ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕುಂದಾಪುರ ವಾಜಪೇಯಿ ಎಂದು ಖ್ಯಾತಿ ಪಡೆದಿದ್ದ ಜನಮೆಚ್ಚುಗೆಯ ನಾಯಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಚುನಾವಣೆ ರಂಗಕ್ಕೆ ಗುಡ್ ಬೈ ಹೇಳಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕುಂದಾಪುರ ವಿಧಾನಸಭೆ ಕ್ಷೇತ್ರವನ್ನು ಕಮಲದ ಪಾಳಾಯಕ್ಕೆ ವಶ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಪಕ್ಷದ ಜನಪ್ರಿಯ ಶಾಸಕರಾದ ಸೋಲಿಲ್ಲದ ಸರದಾರರಾಗಿ ಮೇರೆದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ರಾಜಕೀಯ ನಿವೃತ್ತಿ ರಾಜ್ಯ ರಾಜಾಕಾರಣದಲ್ಲಿ ಅಚ್ಚರಿ ಮೂಡಿಸಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಬದಲಾವಣೆಯ ಬಿರುಗಾಳಿ ಬಿಸಿರುವುದರಿಂದ ಚುನಾವಣೆ ರಂಗ ಹಲವು ಕೂತೂಹಲಕ್ಕೆ ಕಾರಣವಾಗಿದೆ. ಪತ್ರಿಕಾ ಪ್ರಕಟಣೆಯ ಮೂಲಕ ರಾಜಕೀಯ ನಿವೃತ್ತಿಯನ್ನು ಸ್ವತಃ ಘೋಷಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕ್ಷೇತ್ರದ ಮತದಾರರಿಗೆ ಭಾವನಾತ್ಮಕವಾಗಿ ಧನ್ಯವಾದವನ್ನು ಅರ್ಪಿಸಿದ್ದಾರೆ.
ಐದು ಬಾರಿ ಶಾಸಕನಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ನಡೆದ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್, ತಾಲೂಕು ಮತ್ತು ಜಿಲ್ಲಾ ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಚುನವಾಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ದುಡಿದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ,ಪ್ರಮುಖರಿಗೆ ಹಾಗೂ ಅಭಿಮಾನಿಗಳಿಗೆ ತಾನು ಯಾವತ್ತೂ ಚಿರಋಣಿಯಾಗಿರುತ್ತೇನೆ ಎನ್ನುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಹಾಲಾಡಿ ನಿವೃತ್ತಿಗೆ ಪಕ್ಷದ ಒತ್ತಾಯ ಕಾರಣವೇ ?
ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಗಟ್ಟಿಯಾಗಿ ನೆಲೆಗಟ್ಟನ್ನು ಒದಗಿಸಿಕೊಟ್ಟಿದ್ದ ಶಾಸಕ ಹಾಲಾಡಿ ಶ್ರಿನೀವಾಸ ಶೆಟ್ಟಿ ಅವರಿಗೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪಕ್ಷದ ಒತ್ತಾಯವೆ ಕಾರಣವಿರಬಹುದೆ ಎನ್ನಲಾಗುತ್ತಿದೆ.ಬೇರೆಯವರಿಗೆ ಅವಕಾಶವನ್ನು ನೀಡಲು ಪಕ್ಷ ಸೂಚಿಸಿದ್ದರಿಂದ ಹಾಲಾಡಿ ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ ಎನ್ನುವ ಮಾತುಗಳು ಹೊರಬೀಳುತ್ತಿದೆ.
ಕಾಂಗ್ರೆಸ್ ಪಾಳಾಯದಲ್ಲಿ ಹುರುಪು:
ಸೋಲಿಲ್ಲದ ಸರದಾರನಾಗಿ ಸತತ ಗೆಲ್ಲುವನ್ನು ಸಾಧಿಸುತ್ತಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಗೆಲುವಿನ ನಾಗಲೋಟಕ್ಕೆ ಬ್ರೆಕ್ ಹಾಕಬೇಕೆಂದು ಹೆಚ್ಚು ಕಮ್ಮಿ ಎರಡೂವರೆ ದಶಕಗಳಿಂದ ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ಗೆ ಶ್ರೀನಿವಾಸ್ ಶೆಟ್ಟಿ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗಿರಲಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆ ರಂಗದಲ್ಲಿ ಇರುವಷ್ಟು ದಿವಸ ಕಾಂಗ್ರೆಸ್ಗೆ ಕುಂದಾಪುರದಲ್ಲಿ ಗೆಲುವು ಎನ್ನುವುದು ಮರಿಚಿಕೆಯಾಗಿತ್ತು. ಇದಿಗಾ ಸ್ವತಃ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆ ರಂಗದಿಂದ ಹಿಂದೆ ಸರಿದಿರುವುದದರಿಂದ ಕಾಂಗ್ರೆಸ್ ಪಾಳಾಯದಲ್ಲಿ ಹುರುಪಿನ ವಾತಾವರಣ ಕಂಡು ಬಂದಿದೆ.
ಮೊಳಹಳ್ಳಿ ದಿನೇಶ್ ಹೆಗ್ಡೆಗೆ ಗೆಲುವು ಒಲಿಯುವುದೆ ?
ಸತತ ಸೋಲನ್ನು ಕಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ರಾಜಕೀಯ ನಿವೃತ್ತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಆಸೆ ಚಿಗುರೊಡೆದಿದೆ ಕುಂದಾಪುರದಲ್ಲಿ ಮರಳಿ ಸಾಮ್ರಾಜ್ಯವನ್ನು ಸ್ಥಾಪಿಸಲು ಹವಣಿಸುತ್ತಿದೆ. ಬಿಜೆಪಿ ಪಕ್ಷದ ಹೊಸ ಅಭ್ಯರ್ಥಿ ಎದುರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆಗೆ ಗೆಲುವು ಸುಲಭವಾಗಿ ಧಕ್ಕಲಿದೆ ಎನ್ನುವ ಲೆಕ್ಕಾಚಾರ ಕೂಡ ಹೊರಬಿದ್ದಿದೆ.