ಉಡುಪಿ: ಸಾಣೂರು ಗ್ರಾಮದ ರಬ್ಬರ್ ಪ್ಲಾಂಟೇಶನ್ ವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಕೇರಳ ಮಲಪ್ಪುರಂ ನಿವಾಸಿ ಗೋಪಿನಾಥನ್ ನಾಯರ್ ಎಂಬವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಸಾವು ಆತ್ಮಹತ್ಯೆ ಅಲ್ಲ. ಅದೊಂದು ವ್ಯವಸ್ಥಿತ ಕೊಲೆ.
ಆದರೆ, ದೂರು ನೀಡಿ 15 ಕಳೆದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದ ಪೊಲೀಸರು ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ರಬ್ಬರ್ ಪ್ಲಾಂಟೇಶನ್ ಮಾಲೀಕ ಬಿಜು ಥೋಮಸ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತರ ಪತ್ನಿ ದೂರು ನೀಡಿ 15ದಿನಗಳು ಕಳೆದಿವೆ. ಆದರೆ ಈವರೆಗೂ ಆರೋಪಿಗಳ ಬಂಧನವಾಗಿಲ್ಲ. ಪ್ರಕರಣ ತನಿಖೆ ನಡೆಸಲು ಪೊಲೀಸರು ಮೀನಾಮೇಷ ಎನಿಸುತ್ತಿದ್ದು, ಪ್ರಕರಣದ ಕೂಲಂಕಷ ತನಿಖೆ ನಡೆಸಲು ವಿಫಲರಾಗಿದ್ದಾರೆ ಎಂದು ದೂರಿದರು.
ಈ ರಬ್ಬರ್ ಪ್ಲಾಂಟೇಶನ್ ವಿಚಾರದಲ್ಲಿ ಆರ್.ವಿವೇಕಾನಂದ ಶೆಣೈ ಮತ್ತು ನನ್ನ ನಡುವೆ ತಕರಾರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಎರಡು ಬಾರಿ ಆರ್.ವಿವೇಕಾನಂದ ಶೆಣೈ ನನಗೆ ಜೀವ ಬೆದರಿಕೆ ಕೊಟ್ಟಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿಲ್ಲ. ನನಗೂ ಜೀವಭಯವಿದ್ದು, ನನ್ನ ಸಂಕಷ್ಟಕ್ಕೆ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿದರು.
ಘಟನೆ ಸಂಬಂಧಿಸಿ ಗೋಪಿನಾಥನ್ ನಾಯರ್ ಅವರ ಪತ್ನಿ ಸುಧಾ ಕೆ.ಎಸ್ ಡಿ.16ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಉದ್ಯಮಿ ಆರ್.ವಿವೇಕಾನಂದ ಶೆಣೈ ಹಾಗೂ ದಿಲೀಪ್ ಜಿ ಎಂಬವರ ವಿರುದ್ದ ಅವರು ದೂರು ನೀಡಿದ್ದರು. ಇವರು ತನ್ನ ಪತಿಗೆ ಸರಿಯಾಗಿ ವೇತನ ನೀಡದೆ ಅಗತ್ಯವಿದ್ದಾಗ ರಜೆಯೂ ಕೊಡದೆ ಕಿರುಕುಳ ನೀಡುತ್ತಿದ್ದರು. ಕೆಲಸ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದಾರೆ.
ಕಳೆದ ಅ.17ರಂದು ವಾಯಿಸ್ ಮೆಸೆಜ್ ಕಳುಹಿಸಿ ಎರಡು-ಮೂರು ಮೊಬೈಲ್ ಸಂಖ್ಯೆ ಕಳುಹಿಸುತ್ತೇನೆ. ಅದನ್ನು ಸೇವ್ ಮಾಡಿಟ್ಟುಕೊಂಡು ಸಂಜೆಯ ಸಮಯ ನಾನು ಫೋನ್ ಕರೆ ಸ್ವೀಕರಿಸದಿದ್ದರೆ ಈ ನಂಬರ್ಗಳನ್ನು ಪೊಲೀಸರಿಗೆ ತಿಳಿಸುವಂತೆ ಸೂಚಿಸಿರುತ್ತಾರೆ.
ಆದರೆ ಅ. 19ರಂದು ಗೋಪಿನಾಥನ್ ಅವರ ಶವ ರಬ್ಬರ್ ತೋಟದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಪೆಟ್ರೋಲ್ ಸುರಿದುಕೊಂಡು ಕ್ರೂರ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ಆಪಾದಿತರು ತಮ್ಮ ಕ್ರಿಮಿನಲ್ ಹಿನ್ನೆಲೆಯ ಸಂಗಡಿಗರೊಂದಿಗೆ ಪತಿಗೆ ಹಿಂಸೆ ನೀಡಿ ಆತ್ಮಹತ್ಯೆ ಮಾಡಲು ಪ್ರಚೋದಿಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ ಎಂದರು.