ಉಡುಪಿ: ಈಜು ಇತರ ಕ್ರೀಡೆಗಳಿಗಿಂತ ವಿಭಿನ್ನವಾಗಿದ್ದು, ಇದು ನಮ್ಮಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮಾಹೆ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ಹೇಳಿದರು.
ಉಡುಪಿ ಸ್ವಿಮ್ಮಿಂಗ್ ಕ್ಲಬ್ ಆಶ್ರಯದಲ್ಲಿ ವಿ ಓನ್ ಅಕ್ವ ಮತ್ತು ಮಣಿಪಾಲ ಮಾಹೆಯ ಸಹಯೋಗದಲ್ಲಿ ಉಡುಪಿ ಅಜ್ಜರಕಾಡಿನ ಈಜುಕೊಳದಲ್ಲಿ ಇಂದು ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಎರಡನೇ ಈಜು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಉಡುಪಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿದರು.
ಉಡುಪಿ ಸ್ವಿಮ್ಮಿಂಗ್ ಅಧ್ಯಕ್ಷ ರವೀಂದ್ರ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೃಪಾ ಪ್ರಸಿದ್, ಕೋಶಾಧಿಕಾರಿ ಸುಚಿತಾ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ಈಜುಪಟುಗಳಾದ ಅರ್ಚನಾ, ಅನನ್ಯ ಹಾಗೂ ರಾಜಶೇಖರ್ ಅವರನ್ನು ಗೌರವಿಸಲಾಯಿತು. ಶಿವಕುಮಾರ್ ವಂದಿಸಿದರು. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಜಿಲ್ಲೆಯ ಸುಮಾರು 150 ಈಜುಪಟುಗಳು ಪಾಲ್ಗೊಂಡಿದ್ದರು.