ಉಡುಪಿ: ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ. ಬಿಜೆಪಿ ಓಟಿಗಾಗಿ ವಾಸ್ತವ ವಿಷಯವನ್ನು ತಿರುಚಿ ಸುಳ್ಳು ಸುದ್ದಿ ಹರಡುತ್ತಿದೆ. ಪ್ರಜ್ಞಾವಂತ ಮತದಾರರು ಇದನ್ನು ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ ಬೇಕು ಎಂದು ಉಡುಪಿ ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಕರೆ ನೀಡಿದ್ದಾರೆ.
ಹನುಮಂತ ದೇವರು ಯಾವ ಸಂಘಟನೆಯ ವೈಯುಕ್ತಿಕ ಸೊತ್ತಲ್ಲಾ, ಬಜರಂಗದಳವನ್ನು ಸಮೀಕರಿಸುವ ಮೂಲಕ ಬಿಜೆಪಿ ಭಕ್ತರ ಭಾವನೆಗೆ ಧಕ್ಕೆ ತರುವುದು ಸರಿಯಾದ ನಡೆಯಲ್ಲ. ಹನುಮ ದೇವರ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದ್ದಾರೆ. ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಯಾವುದೇ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುವುದಿಲ್ಲ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸರಕಾರದಿಂದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಬಜರಂಗದಳವನ್ನು ನಿಷೇಧಿಸುವ ಯಾವ ಪ್ರಸ್ತಾವನೆಯೂ ಕಾಂಗ್ರೆಸ್ ಮುಂದೆ ಇಲ್ಲ ಎಂದು ಒತ್ತಿ ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸಮಾಜದ ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿದೆ. ಆದರೆ ಬಿಜೆಪಿಯು ಪ್ರಣಾಳಿಕೆಯಲ್ಲಿನ ವಿಷಯಗಳನ್ನು ತಿರುಚಿ ಹಿಂದೂಗಳು ಆರಾಧಿಸುವ ಹನುಮಂತನ ಜೊತೆ ತನ್ನ ಸಂಘಟನೆ ಭಜರಂಗದಳವನ್ನು ಹೋಲಿಕೆ ಮಾಡಿರುವುದು ಬಿಜೆಪಿಯ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಮತಗಳಿಕೆಗಾಗಿ ದೇವರುಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವುದು ಅವರಲ್ಲಿಯ ಅಭಿವೃದ್ಧಿಯ ಚಿಂತನೆಯ ಕೊರತೆಯಿಂದ ಧರ್ಮ ಮತ್ತು ಜಾತಿಯ ಹೆಸರಲ್ಲಿ ಸಮಾಜವನ್ನು ವಿಭಜಿಸುವ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಕಠಿಣ ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ. ಇದನ್ನು ಬಿಜೆಪಿ ವಿರೋಧಿಸುತ್ತದೆ ಎಂದರೆ ಬಿಜೆಪಿ ಕಾನೂನು ಬಾಹಿರ ಚಟುವಟಿಕೆಗಳನ್ನು ಪೂಜಿಸುತ್ತದೆ ಹಾಗೂ ಪ್ರಚೋದಿಸುತ್ತದೆ ಎಂದು ಅರ್ಥ. ಪ್ರಣಾಳಿಕೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದು ಇದನ್ನು ಬಿಜೆಪಿ ವಿರೋಧಿಸುವುದರಿಂದ ಬಿಜೆಪಿಗೆ ಕಾನೂನಿನ ಮೇಲೆಯೂ ವಿಶ್ವಾಸವಿಲ್ಲ ಹಾಗೂ ಗೌರವೂ ಇಲ್ಲ ಎಂಬುದು ಸಾಬೀತಾಗಿದೆ ಎಂದರು.
ಕಾಂಗ್ರೆಸ್ ಶಾಂತಿ, ಸೌಹಾರ್ದ, ಸಮಾಜ ಕಟ್ಟುವ ಉದ್ದೇಶದಿಂದ ಪ್ರಣಾಳಿಕೆಯಲ್ಲಿ ಈ ಬಗ್ಗೆ ತಿಳಿಸಿದೆ. ಆದರೆ ಜಾತಿ ಧರ್ಮವನ್ನು ಒಡೆದು ಆಳುವ ನೀತಿ ಅನುಸರಿಸುವ ಬಿಜೆಪಿಗೆ ಸಮಾಜದಲ್ಲಿ ಶಾಂತಿ ಸೌರ್ಹಾದತೆ ಬೇಕಾಗಿಲ್ಲ. ಅಮಾಯಕರ ನೆತ್ತರಲ್ಲಿ ಮತ ಫಸಲು ಪಡೆಯುವ ಉದ್ದೇಶ ಹೊಂದಿರುವ ಬಿಜೆಪಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತದೆ. ಇದರಿಂದ ನೋವುಂಡ ಕರಾವಳಿ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.