ಉಡುಪಿ: ವಿಧಾನಸಭೆ ಚುನಾವಣೆಗೆ ಎರಡು ತಿಂಗಳು ಬಾಕಿಯಿದ್ದು, ರಾಜ್ಯ ಬಿಜೆಪಿ ಸರಕಾರ ಚುನಾವಣೆಯಲ್ಲಿ ಮತ ಗಳಿಸುವ ಎಟಿಎಂ ಮಿಷನ್ ತರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ದಿನಕ್ಕೊಂದು ಘೋಷಣೆ ಮಾಡುತ್ತಿದೆ. ಚುನಾವಣೆಯ ಹೊಸ್ತಿಲಿನಲ್ಲಿ ಘೋಷಣೆ ಮಾಡುವ ಯೋಜನೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಲ್ಲವ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರವು ಬಿಲ್ಲವ ಮತಗಳಿಸಲು ನಿಗಮದ ಘೋಷಣೆ ಮಾಡಲು ಹೊರಟಿದೆ. ಆದರೆ ಕೇವಲ ನಿಗಮ ಘೋಷಣೆ ಮಾಡಿದ್ರೆ ಯಾವುದೇ ಪ್ರಯೋಜವಿಲ್ಲ. ಸ್ವ ಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕೆಂಬ ಸಮುದಾಯದ ಬೇಡಿಕೆ ಇದೆ. ಅದಕ್ಕೆ ಅನುಗುಣವಾಗಿ ಅನುದಾನ ಮೀಸಲಿಡಬೇಕು. ಚುನಾವಣೆ ಹಿತದೃಷ್ಟಿಯಿಂದ ನಿಗಮ ಘೋಷಣೆಯಾದರೆ ಯಾವುದೇ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.