ಉಡುಪಿ: ಮರೆವಿನ ಕಾಯಿಲೆಯಿಂದಾಗಿ ಎರಡು ದಿನಗಳ ಹಿಂದೆ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ನಡೆದುಕೊಂಡು ಹೋಗುತ್ತಿದ್ದ ತಮಿಳುನಾಡು ಮೂಲದ ವೃದ್ದರೋರ್ವರನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ರಕ್ಷಿಸಿ, ಬಳಿಕ ಮಗನಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
72 ವರ್ಷದ ಷಣ್ಮುಗಂ ಎಂಬವರು ಊರಿನವರೊಂದಿಗೆ ಕೊಲ್ಲೂರು ಕ್ಷೇತ್ರಕ್ಕೆ ಬಂದಿದ್ದು, ಕೊಲ್ಲೂರಿನಿಂದ ಯಾವುದೋ ವಾಹನದಲ್ಲಿ ಉಡುಪಿಗೆ ಬಂದು ಅತಂತ್ರರಾಗಿದ್ದರು. ಧರಿಸಿದ್ದ ಪಂಚೆ ಹಾಗೂ ಶರ್ಟ್ ಅನ್ನು ಬಿಸಾಡಿ ಬರೇ ಲುಂಗಿಯಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸುತ್ತಿದ್ದರು. ಈ ವಿಷಯ ತಿಳಿದ ವಿಶು ಶೆಟ್ಟಿ ಅವರು ಷಣ್ಮುಗಂ ಅವರನ್ನು ರಕ್ಷಿಸಿ ತುರ್ತು ನೆಲೆಗಾಗಿ ಉದ್ಯಾವರದ ಕನಸಿನ ಮನೆ ಆಶ್ರಮಕ್ಕೆ ದಾಖಲಿಸಿದ್ದರು.
ಷಣ್ಮುಗಂ ಅವರ ಕುಟುಂಬಸ್ಥರು ಕಾಣೆಯಾದ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಕೊಲ್ಲೂರು ಠಾಣೆಗೆ ಅವರನ್ನು ರಕ್ಷಣೆ ಮಾಡಿರುವ ಮಾಹಿತಿ ನೀಡಿದ್ದಾರೆ. ಅತ್ತ ತಂದೆ ಕಾಣೆಯಾದ ಬಗ್ಗೆ ಸುದ್ದಿ ತಿಳಿದ ಮಗ ತಮಿಳುನಾಡಿನಿಂದ ಕೊಲ್ಲೂರಿಗೆ ಬಂದಿದ್ದಾರೆ. ಇಂದು ಮಗ ಹಾಗೂ ಕೊಲ್ಲೂರು ಪೊಲೀಸರು ಉಡುಪಿಗೆ ಬಂದು ವೃದ್ಧ ತಂದೆಯನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ.
ತಂದೆಯನ್ನು ನೋಡಿದ ಮಗ ರಕ್ಷಣೆ ಮಾಡಿದ ವಿಶು ಶೆಟ್ಟಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಮಗನನ್ನು ನೋಡಿದ ಸಂತೋಷದಿಂದ ತಂದೆ ಕಣ್ಣೀರು ಹಾಕಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ರಾಮದಾಸ್ ಪಾಲನ್ ಉದ್ಯಾವರ, ಪೌಲ್ ಸಿಜು ಹಾಗೂ ಆಶ್ರಮದ ಮೇಲ್ವಿಚಾರಕಿ ಕವಿತ ತುರ್ತು ನೆಲೆ ನೀಡುವ ಮುಖಾಂತರ ಸಹಕರಿಸಿದ್ದಾರೆ.