ಕಾರ್ಕಳ: ಬಿಸಿಲಿನ ತಾಪಮಾನ ಹೆಚ್ಚಳದಿಂದಾಗಿ ಹಾವುಗಳು ತಂಪು ಪ್ರದೇಶಗಳನ್ನು ಆಶ್ರಯಿಸಿ ಹಾಗೂ ಆಹಾರ ಹುಡುಕಿ ಕೊಂಡು ಮನೆ ಹಾಗೂ ಕಟ್ಟಡಗಳಿಗೆ ನುಗ್ಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಅಂತಹ ಘಟನೆಯೂ ಕಾರ್ಕಳ ಅಸುಪಾಸುಗಳಲ್ಲಿ ನಡೆಯುತ್ತಿದೆ. ಶನಿವಾರ ಒಂದೇ ದಿನ ನಾಲ್ಕು ನಾಗರಹಾವುಗಳು ಮೂರು ಮನೆಯೊಳಗೆ ಸೇರಿಕೊಂಡಿದ್ದು ಉರಗ ಪ್ರೇಮಿ ಅನಿಲ್ ಪ್ರಭು ಅವುಗಳ ಸೆರೆಹಿಡಿದಿದ್ದಾರೆ.
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಪಕ್ಕದ ಮನೆಯೊಳಗೆ ಎರಡು ನಾಗರಹಾವುಗಳು ಸೇರಿದವು. ಅದನ್ನು ಕಂಡ ಮನೆ ಮಾಲಕ, ಉರಗ ಪ್ರೇಮಿ ಅನಿಲ್ ಪ್ರಭು ಅವರನ್ನು ಸಂಪರ್ಕಿಸಿದರು. ಘಟನಾ ಸ್ಥಳಕ್ಕೆ ತೆರಳಿದ ಅನಿಲ್ ಪ್ರಭು ಕ್ಷಣ ಮಾತ್ರದಲ್ಲಿ ಹಾವುಗಳೆರಡುಗಳನ್ನು ಸೆರೆ ಹಿಡಿದಿದ್ದಾರೆ.
ಕಾರ್ಕಳ ನಗರದ ಸಾಲ್ಮರ್ ಮಿಲ್ ಬಳಿಯ ಮನೆಯೊಂದರಲ್ಲಿ ಹಾಗೂ ಶ್ರೀ ಭುವನೇಂದ್ರ ಕಾಲೇಜು ಬಳಿಯ ಮನೆಯೊಂದರಲ್ಲೂ ನಾಗರಹಾವುಗಳು ಮುದುರಿ ಕುಳಿತಿತ್ತು. ಅಲ್ಲಿಗೂ ತೆರಳಿದ ಉರಗ ಪ್ರೇಮಿ ಅನಿಲ್ ಪ್ರಭು ಅವುಗಳನ್ನು ಸೆರೆ ಹಿಡಿದಿದ್ದಾರೆ.
ನಾಲ್ಕು ನಾಗರಹಾವುಗಳನ್ನು ದುರ್ಗ ಅಭಯಾರಣ್ಯದಲ್ಲಿ ಬಂಧಮುಕ್ತಗೊಳಿಸಿದ್ದಾರೆ.