ಉಡುಪಿ: ಉಡುಪಿ ಚಿಕ್ಕಮಗಳೂರು ನನ್ನ ಕ್ಷೇತ್ರ, ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನನ್ನ ಬಗ್ಗೆ ಗೊತ್ತೇ ಇಲ್ಲದಾಗ ಉಡುಪಿ ಚಿಕ್ಕಮಗಳೂರು ಜನ ನನ್ನನ್ನು ಗೆಲ್ಲಿಸಿದ್ದಾರೆ. ಹಾಗಾಗಿ ನಾನು ಬೇರೆ ಕಡೆ ಹೋಗುವ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ನನ್ನ ಹೆಸರು ಬರುತ್ತಾ ಇದೆ. ಆ ಕ್ಷೇತ್ರಕ್ಕೆ ಈ ಕ್ಷೇತ್ರಕ್ಕೆ ಎಂಬ ಐದಾರು ಕ್ಷೇತ್ರದ ಹೆಸರು ಕೇಳಿ ಬರುತ್ತಿದೆ. ಆದರೆ ನಾನು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದರು.
ಪಾರ್ಟಿಯ ನಿರ್ಧಾರಕ್ಕೆ ಪಾರ್ಟಿ ಕೊಡುವ ಸೂಚನೆಗೆ ನಾನು ಬದ್ಧಳಾಗಿದ್ದೇನೆ. ಈ ಬಾರಿ ಅಭಿವೃದ್ಧಿ ಆಧಾರದಲ್ಲಿ ನಾನು ವೋಟು ಕೇಳುತ್ತೇನೆ. ಮೋದಿ ಸರ್ಕಾರದ ಅವಧಿಯಲ್ಲಿ ಏನಾಗಿದೆ ಎಂದು ಹೇಳಿ ವೋಟ್ ಕೇಳುತ್ತೇನೆ ಎಂದರು.
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಕಾಂಗ್ರೆಸ್ಸಿಗೆ ಹೋಗ್ತಾರೆ ಯಾರು ಬಿಜೆಪಿಯಲ್ಲಿ ಇರ್ತಾರೆ ನನಗೆ ಗೊತ್ತಿಲ್ಲ. ಪಕ್ಷದಿಂದ ಲಾಭ ಪಡೆದು ಪಕ್ಷ ತ್ಯಜಿಸಿದರೆ ಅವರಿಗೆ ನಷ್ಟ. ಅಧಿಕಾರದಲ್ಲಿದ್ದಾಗ ಬರ್ತೀವಿ ಇಲ್ಲದಾಗ ಹೋಗ್ತಿವಿ ಎಂಬುದು ಬಿಜೆಪಿಯ ಮಾನಸಿಕತೆ ಅಲ್ಲ. ಯಾರೂ ಪಕ್ಷವನ್ನು ಬಿಡಬೇಡಿ ಎಂದು ವಿನಂತಿಸುತ್ತೇನೆ. ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ, ವಿಶ್ವನಾಯಕ ಮಾಡುವ ಅವಕಾಶ ಸಿಗಲಿದೆ ಎಂದರು.