ಉಡುಪಿ: ಕಾಂಗ್ರೆಸ್ಸಿನ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಲವಾರು ಅವಾಂತರವಾಗಿದೆ. ಖಾಸಗಿ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹಲವಾರು ಯೋಜನೆಗಳಿಗೆ ಸರಿಯಾಗಿ ಹಣ ಸಿಕ್ತಾ ಇಲ್ಲ. ಸಾಮಾಜಿಕ ಭದ್ರತಾ ಯೋಜನೆಗೆ ಹಣ ಇಲ್ಲ. ಗ್ಯಾರಂಟಿ ಕೊಟ್ಟರೆ ಸಾಕು ಬೇರೆಲ್ಲ ಬಿದ್ದು ಹೋಗಲಿ ಅಂತ ಕಾಂಗ್ರೆಸ್ ಯೋಚಿಸ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಈ ರಾಜ್ಯದ ನ್ಯಾಯಾಧೀಶರಿಗೆ , ಶಿಕ್ಷಕರಿಗೆ ಮತ್ತೆಲ್ಲರಿಗೂ ಒಂದು ವಾರ ತಡವಾಗಿ ಸಂಬಳವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರಕಾರದ ಕೊಡುಗೆ ನಿಲ್ಲಿಸಿದ್ದೀರಿ. ವಿಧವಾ ವೃದ್ಧಾಪ್ಯ ವೇತನ ತಡವಾಗುತ್ತಿದೆ, ಸರ್ಕಾರಿ ನೌಕರರ ಸಂಬಳ ತಡವಾಗುತ್ತಿದೆ ಎಂದರು.
ಖಾಸಗಿಯವರಿಗೆ ಏನು ಪರ್ಯಾಯ ವ್ಯವಸ್ಥೆ ಮಾಡಿದ್ದೀರಿ?. ಫ್ರೀ ಅಂತ ಇನ್ನೊಬ್ಬರಿಂದ ಕಿತ್ಕೋತಿದ್ದೀರಿ, ದರೋಡೆ ಮಾಡುತ್ತಿದ್ದೀರಿ. ಖಾಸಗಿಯವನು ಸಾಲ ಹೇಗೆ ಕಟ್ಟಬೇಕು..!? ಜೀವನ ಹೇಗೆ ಮಾಡಬೇಕು. ಖಾಸಗಿ ಅವರಿಗೂ ಹೇಗೆ ಸಹಾಯ ಮಾಡಬಹುದು ಎಂದು ಆಲೋಚಿಸಿ ಎಂದರು.
ಸರ್ಕಾರ ಇವತ್ತು ಸರಿಯಾಗಿ ವಿದ್ಯುತ್ ನೀಡ್ತಾ ಇಲ್ಲ. ರೂಟ್ ಬಸ್ ಶೇ. 50ರಷ್ಟು ಕಡಿತ ಮಾಡಿದ್ದು ಯಾಕೆ? ಸಾರಿಗೆ ಇಲಾಖೆಯ ಸಂಸ್ಥೆಗಳು ನಷ್ಟಕ್ಕೆ ಹೋಗುತ್ತಿವೆ. ಎಲ್ಲದಕ್ಕೂ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಗುಡುಗಿದರು.