ಉಡುಪಿ: ಅಯೋಧ್ಯೆಯ ರಾಮ ದೇವರಿಗೆ ಸ್ವತಃ ತಾವೇ ಪ್ರಾಣ ಪ್ರತಿಷ್ಠೆ ನಡೆಸಿ ಮುಂದಿನ 48 ದಿನಗಳ ಕಾಲ ಮಂಡಲ ಪೂಜೆ ಪೂರೈಸಿರುವ ಪೇಜಾವರ ಶ್ರೀಗಳನ್ನು ಬೆಂಗಳೂರು ಮಠಕ್ಕೆ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
ನಗರದ ಪ್ರಮುಖ ರಸ್ತೆಯಲ್ಲಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು. ಬಳಿಕ ಪೇಜಾವರ ಮಠದ ವಿದ್ಯಾಪೀಠದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನ್ಯಾಯಮೂರ್ತಿ ದಿನೇಶ್ ಕುಮಾರ್, ರವಿ ಸುಬ್ರಮಣ್ಯ, ಅರವಿಂದ ಲಿಂಬಾವಳಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಪುನರುತ್ಥಾನದ ಪ್ರತೀಕವಾಗಿ ಐದು ಶತಮಾನದ ಬಳಿಕ ರಾಮಮಂದಿರ ನಿರ್ಮಾಣವಾಗಿದೆ. ಹಿರಿಯ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥರಿಂದ ರಾಮಲಲ್ಲಾನ ಮೂರ್ತಿ ಸ್ಥಾಪಿಸಲ್ಪಟ್ಟಿದ್ದು, ಇದೀಗ ನೂತನ ಭವ್ಯ ವಿಗ್ರಹಕ್ಕೆ ಶ್ರೀ ವಿಶ್ವ ಪ್ರಸನ್ನತೀರ್ಥರಿಂದ ಪ್ರಾಣ ಪ್ರತಿಷ್ಠೆ ನಡೆದಿರುವುದು ಐತಿಹಾಸಿಕವಾಗಿದೆ ಎಂದು ಗಣ್ಯರು ಶ್ರೀಗಳನ್ನು ಅಭಿನಂದಿಸಿದರು. 60 ದಿನಗಳ ಬಳಿಕ ವಿಶ್ವೇಶ ತೀರ್ಥರ ವೃಂದಾವನಕ್ಕೆ ಭೇಟಿಕೊಟ್ಟು ವಿಶ್ವ ಪ್ರಸನ್ನತೀರ್ಥರು ಪೂಜೆ ನಡೆಸಿದರು