ಉಡುಪಿ: ಬಾಕ್ಸಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಪ್ರತಿಭೆ ವಿರಾಜ್ ಮೆಂಡನ್ (28) ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಪಡುಕರೆಯಲ್ಲಿ ಇಂದು ನಡೆದಿದೆ.
ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮುಂಜಾನೆ ಮನೆಯವರು ಮೀನುಗಾರಿಕೆಗೆ ತೆರಳಿದ್ದ ವೇಳೆ ಒಬ್ಬರೇ ಮನೆಯಲ್ಲೇ ಇದ್ದಾಗ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮಲ್ಪೆ ಪಡುಕರೆಯ ಭಾಸ್ಕರ್ ಕುಂದರ್ ಹಾಗೂ ಮೋಹಿನಿ ಮೆಂಡನ್ ಅವರ ಪುತ್ರ. ಗೆಳೆಯರು ನೀಡಿದ ಸಲಹೆ ಮೇರಿಗೆ ಬಾಕ್ಸಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಿರಾಜ್, ಕಳೆದ ಎಂಟು ವರ್ಷಗಳಿಂದ ಬಾಕ್ಸಿಂಗ್ನಲ್ಲಿ ತೊಡಗಿಸಿಕೊಂಡಿದ್ದರು. ಭಾರತದಲ್ಲಿ ಪ್ರೊ ಬಾಕ್ಸಿಂಗ್ನಲ್ಲಿ 5 ನೇ ರ್ಯಾಂಕ್ ಹೊಂದಿರುವ ವಿರಾಜ್ ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ದೇಶಕ್ಕೆ ಕೀರ್ತಿ ತರಬೇಕೆಂಬ ಹಂಬಲ ಹೊಂದಿದ್ದರು.
ವಿರಾಜ್ ಮಲ್ಪೆ ಬಂದರಿನಲ್ಲಿ ಕಣ್ಣೀ ಕೆಲಸ ಮಾಡಿಕೊಂಡು ಬಿಡುವಿದ್ದಾಗ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದರು. ಮುಂಜಾನೆ ಎದ್ದು ಮೀನುಗಾರಿಕಾ ವೃತ್ತಿ ಮಾಡಿ ನಂತರ ಬಿಡುವಿನ ಸಮಯದಲ್ಲಿ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದರು. ಇಂಡಿಯನ್ ಬಾಕ್ಸಿಂಗ್ ಕೌನ್ಸಿಲ್ ನಡೆಸುವ ಪ್ರೋ ಬಾಕ್ಸಿಂಗ್ನಲ್ಲಿ ವಿರಾಜ್ ಮೆಂಡನ್ ಒಟ್ಟು ನಾಲ್ಕು ಬಾರಿ ಸ್ಪರ್ಧಿಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಒಟ್ಟು 21 ಪದಕಗಳನ್ನು ಗೆದ್ದಿದ್ದು, ಅದರಲ್ಲಿ 14 ಚಿನ್ನದ ಪದಕ ಪಡೆದಿದ್ದ ಸಾಧಕ. ಆದರೆ ಅಚಾನಕ್ಕಾಗಿ ತಮ್ಮ ಜೀವನವನ್ನು ಅಂತ್ಯ ಮಾಡಿಕೊಂಡಿರುವ ರೀತಿಗೆ ಕ್ರೀಡಾ ಪ್ರೇಮಿಗಳು ಮರುಗಿದ್ದಾರೆ.