ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಮಣಿಪಾಲ ಔಷಧೀಯ ವಿಜ್ಞಾನದ ಕಾಲೇಜು (ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಸಿಜಿಎಂಪಿ ಕೇಂದ್ರ (ಸೆಂಟರ್ ಫಾರ್ ಸಿಜಿಎಂಪಿ) ವು ಪ್ರಥಮ ಬಾರಿಗೆ ‘ರಾಷ್ಟ್ರೀಯ ಪ್ರಸ್ತುತ ಉತ್ತಮ ಉತ್ಪಾದನೆಯ ಅನುಷ್ಠಾನ ದಿನ’ ನೇಶನಲ್ ಕರೆಂಟ್ ಗುಡ್ ಮಾನ್ಯುಫ್ಯಾಕ್ಚರಿಂಗ್ ಪ್ರಾಕ್ಟೀಸಸ್ ಡೇ- ಸಿಜಿಎಂಪಿ ಡೇ ವನ್ನು ಆಯೋಜಿಸಿತು. ಪ್ರಸ್ತುತ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸಾಯನ್ಸಸ್ ಸಂಸ್ಥೆಯು ವಜ್ರ ಮಹೋತ್ಸವವನ್ನು ಆಚರಿಸುತ್ತಿದ್ದು, ಸಂಸ್ಥಾಪಕರಾದ ಡಾ. ಟಿ. ಎಂ. ಎ. ಪೈಯವರ 125 ನೆಯ ಜನ್ಮದಿನಾಚರಣೆ ಸಂದರ್ಭದಲ್ಲಿ ‘ರಾಷ್ಟ್ರೀಯ ಸಿಜಿಎಂಪಿ ದಿನ’ದ ಆಚರಣೆಗೆ ಹೆಚ್ಚಿನ ಮಹತ್ತ್ವವಿದೆ. ಈ ಕಾರ್ಯಕ್ರಮವನ್ನು ಐಡಿಎಂಎ ಇಂಡಿಯನ್ ಡ್ರಗ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್’ ಜೊತೆಗೆ ಸಂಯುಕ್ತವಾಗಿ ಹಮ್ಮಿಕೊಳ್ಳಲಾಗಿತ್ತು.
‘ರಾಷ್ಟ್ರೀಯ ಸಿಜಿಎಂಪಿ ದಿನ’ ಆಚರಣೆಯು ಔಷಧೀಯ ಉದ್ಯಮದಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷೆಯನ್ನು ಕಾಯ್ದುಕೊಳ್ಳುವಲ್ಲಿ ‘ಕರೆಂಟ್ ಗುಡ್ ಮಾನ್ಯಫ್ಯಾಕ್ಚರಿಂಗ್ ಪ್ರಾಕ್ಟೀಸಸ್-ಸಿಜಿಎಂಪಿ’ಯ ಪಾತ್ರದ ಕುರಿತು ಜಾಗೃತಿಯನ್ನು ಮೂಡಿಸುವ ಆಶಯವನ್ನು ಕಾರ್ಯಕ್ರಮ ಹೊಂದಿತ್ತು.
ಐಡಿಎಂಎ ನ ರಾಷ್ಟ್ರೀಯ ಅಧ್ಯಕ್ಷರಾದ ಡಾ. ವಿರಂಚಿ ಶಾಹ್ ಅವರು ಮಾತನಾಡಿ ಔಷಧ ಉದ್ಯಮವು ಯಾವಾಗಲೂ ಗುಣಮಟ್ಟದ ಔಷಧವನ್ನು ತಯಾರಿಸಲು ಮತ್ತು ದೋಷಗಳಿಲ್ಲದ ತಯಾರಿಕೆಯ ಪ್ರಕ್ರಿಯೆಯನ್ನು ಹೊಂದಲು ಬದ್ಧವಾಗಿದೆ ಎಂದರು.
ಫಾರ್ಮೆಕ್ಸಿಲ್ನ ಅಧ್ಯಕ್ಷ, ಡಾ. ವೀರಮಣಿ ಎಸ್. ವಿ. ಮಾತನಾಡಿ, ‘ಗುಣಮಟ್ಟವನ್ನು ಹೆಚ್ಚಿಸಲು ದೇಶದೊಳಗಿನ ಔಷಧ ಕಂಪೆನಿಗಳಿಗೆ ಐಡಿಎಂಎಯು ಉಪಕರಣಗಳನ್ನು ಮತ್ತು ತರಬೇತಿಯನ್ನು ಒದಗಿಸುವಲ್ಲಿ ಸಹಕರಿಸುತ್ತಿದೆ ‘ರಾಷ್ಟ್ರೀಯ ಸಿಜಿಎಂಪಿ ದಿನ’ ಆಚರಣೆಯು ಭಾರತದ ದೋಷರಹಿತ ಔಷಧ ತಯಾರಿಕೆಯ ಗುಣಮಟ್ಟದ ಬದ್ದತೆಯ ಸಂದೇಶವನ್ನು ಜಗತ್ತಿಗೆ ತಲುಪಿಸುತ್ತಿದೆ ಎಂದರು.
ಐಡಿಎಂಎ ಯ ರಾಷ್ಟ್ರೀಯ ಅಧ್ಯಕ್ಷ ಡಾ. ವಿರಂಚಿ ಶಾಹ್ ಅವರು ಮಣಿಪಾಲ್ ಸಿಜಿಎಂಪಿ ಡಿಜಿಟಲ್ ಮ್ಯೂಸಿಯಂನ್ನು ಉದ್ಘಾಟಿಸಿದರು. ವಿಶಿಷ್ಟವಾದ ಆ ಮ್ಯೂಸಿಯಂನ್ನು ಮಾಹೆಯ ಸಂಸ್ಥಾಪಕ ಡಾ. ಟಿಎಂಎ ಪೈ ಹೆಸರಿನಲ್ಲಿ ಸಮರ್ಪಿಸಲಾಯಿತು.
ಮಾಹೆಯ ವೈಸ್ ಛಾನ್ಸಲರ್ ಲೆ. ಜ. ಡಾ. ಎಂ. ಡಿ. ವೆಂಕಟೇಶ್ ಅವರು ಡಾ. ಟಿಎಂಎಪೈಯವರ ಜೀವನ ಮೌಲ್ಯಗಳನ್ನು ಮತ್ತು ಅವುಗಳನ್ನು ಅನುಸರಿಸಿದ ಮಾಹೆಯ ಬದ್ಧತೆಯ ಕುರಿತು ಮಾತನಾಡಿದರು. ‘ರಾಷ್ಟ್ರೀಯ ಸಿಜಿಎಂಪಿ ದಿನ’ವನ್ನು ಆಚರಿಸಲು ಮುಂದಾಗಿರುವ ಬಗ್ಗೆ ಮಾಹೆಯ ಸಿಜಿಎಂಪಿ ಕೇಂದ್ರವನ್ನು ಅಭಿನಂದಿಸಿದರು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಪ್ರೊ ವೈಸ್ ಛಾನ್ಸಲರ್ ಆಗಿರುವ ಡಾ. ಶರತ್ ರಾವ್ ವಸ್ತು ಸಂಗ್ರಹಾಲಯ ಸಂದರ್ಶಿಸಿದರು.
ಮಾಹೆಯ ಪ್ರೊ ಛಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ‘ಮಾಹೆಯ ಸಂಸ್ಥಾಪಕ ಡಾ. ಟಿ. ಎಂ. ಎ. ಪೈ ಅವರ 125 ನೆಯ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ಮತ್ತು ಮಣಿಪಾಲ ಔಷಧೀಯ ವಿಜ್ಞಾನದ ಕಾಲೇಜಿನ 60ನೆಯ ವರ್ಷಾಚರಣೆಯ ಸಂದರ್ಭದಲ್ಲಿ ‘ರಾಷ್ಟ್ರೀಯ ಸಿಜಿಎಂಪಿ ದಿನ’ದ ಆಚರಣೆ ಮಾಡುವ ಅವಕಾಶ ಮಾಹೆಗೆ ಒದಗಿರುವುದು ಯೋಗಾಯೋಗ ’ ಎಂದರು. ಉಪ ಔಷಧ ನಿಯಂತ್ರಕ ರಾಜಶೇಖರ್ ಅವರು, ನಿಯಂತ್ರಕ ಘಟಕಗಳು ಜಗತ್ತಿನಾದ್ಯಂತ ಉತ್ತಮ ತಯಾರಿಕೆಯ ವಿಧಾನದ ಕುರಿತು ಗಮನಹರಿಸಿವೆ’ ಎಂದರು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಪ್ರೊ ವೈಸ್ ಛಾನ್ಸಲರ್ ಆಗಿರುವ ಡಾ. ಶರತ್ ರಾವ್ ಸ್ವಾಗತ ಭಾಷಣ ಮಾಡಿದರು. ರಾಷ್ಟ್ರೀಯ ಸಿಜಿಎಂಪಿ ದಿನದ ಸಂಯೋಜನ ಕಾರ್ಯದರ್ಶಿ ಡಾ. ಮುದ್ದುಕೃಷ್ಣ ಬಿ. ಎಸ್. ಧನ್ಯವಾದ ಸಮರ್ಪಿಸಿದರು.
ಪ್ರಥಮ ಬಾರಿಗೆ ಆಯೋಜನೆಗೊಂಡ ‘ರಾಷ್ಟ್ರೀಯ ಸಿಜಿಎಂಪಿ ದಿನ’ದಲ್ಲಿ ಉದ್ಯಮ ತಜ್ಞರು ಮೂರು ವಿಚಾರಗೋಷ್ಠಿಗಳನ್ನು, ಒಂದು ಕಿರು ಕಾರ್ಯಾಗಾರವನ್ನು ಮತ್ತು ಒಂದು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇತ್ತೀಚೆಗಿನ ಅಂತಾರಾಷ್ಟ್ರೀಯ ನಿಯಂತ್ರಕ ಪರಿಷ್ಕಾರಗಳು, ಜಿಎಂಪಿ ಅನುಸರಣೆ, ಜಾಗತಿಕ ಮಾರುಕಟ್ಟೆಗೆ ಉತ್ಪನ್ನಗಳನ್ನು ಸಿದ್ಧಗೊಳಿಸುವಲ್ಲಿ ಗುಣಮಟ್ಟ ಮತ್ತು ನಿಯಂತ್ರಕ ಸವಾಲುಗಳು, ತಯಾರಿಕೆ ಮತ್ತು ವಿತರಣೆಯಲ್ಲಿ ಸಿಜಿಎಂಪಿ, ಸಿಜಿಎಂಪಿ ಅನುಸರಣೆಯ ಭವಿಷ್ಯ- ಇತ್ಯಾದಿ ವಿಚಾರಗಳ ಬಗ್ಗೆ ಕಲಾಪಗಳು ಬೆಳಕು ಚೆಲ್ಲಿದವು. ಐಡಿಎಂಎಯು ದೇಶಾದ್ಯಂತ ವಿಚಾರಸಂಕಿರಣಗಳನ್ನು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಿ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಗಳ ಸಹಭಾಗಿತ್ವವನ್ನು ಸಂಘಟಿಸುತ್ತಿದೆ.