ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ನವೆಂಬರ್ 18 ಮತ್ತು 19ರಂದು 2 ದಿನಗಳ ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಯೋಗ ಮೇಳವನ್ನು ಎಂ. ಆರ್. ಜಿ. ಗ್ರೂಪ್ ನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದೆ. ನ.18ರಂದು ಬೆಳಿಗ್ಗೆ ಎಂ. ಆರ್. ಜಿ ಗ್ರೂಪ್ ನ ಛೇರ್ಮನ್ ಕೆ. ಪ್ರಕಾಶ್ ಶೆಟ್ಟಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಕುಂತಳನಗರದ ಗ್ರಾಮೀಣ ಬಂಟರ ಸಂಘದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಅಭ್ಯರ್ಥಿಗಳು ನೋಂದಣಿ ಮಾಡಬೇಕು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದರು.
ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು. ಕಳೆದ ವರ್ಷದ ಉದ್ಯೋಗ ಮೇಳದಲ್ಲಿ ಸುಮಾರು 450 ಅಭ್ಯರ್ಥಿಗಳಿಗೆ ಉದ್ಯೋಗ ಸಿಕ್ಕಿದೆ ಎಂದು ಹೇಳಿದರು.
ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಪ್ರೋಗ್ರಾಮ್ ಡೈರೆಕ್ಟರ್ ಪ್ರೊ. ದಿವ್ಯ ರಾಣಿ ಮಾತನಾಡಿ, ಮೇಳದಲ್ಲಿ ಒಟ್ಟು 25 ಕಾರ್ಪೊರೇಟ್ ಕಂಪನಿಗಳು ಭಾಗವಹಿಸಲಿವೆ. ಸುಮಾರು 1500 ಉದ್ಯೋಗವಕಾಶಗಳಿದ್ದು, ಇಂಜಿನಿಯರಿಂಗ್, ಎಂಬಿಎ ( ಮ್ಯಾನೇಜೆಂಟ್ ), ಡಿಪ್ಲೊಮೊ, ಐಟಿಐ, ಡಿಗ್ರಿ, ಸಿಎ ಹಾಗೂ ಪಿಯುಸಿ ಕಲಿತ ಉದ್ಯೋಗಕಾಂಕ್ಷಿಗಳಿಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ. ಒಂದು ಅಭ್ಯರ್ಥಿ 5 ಕಂಪನಿಯ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕೋಶಾಧಿಕಾರಿ ವಿಜಿತ್ ಶೆಟ್ಟಿ, ಪದ್ಮನಾಭ ಹೆಗ್ಡೆ, ಹರೀಶ್ ಶೆಟ್ಟಿ ಬೆಳ್ಳೆ, ರಮೇಶ್ ಶೆಟ್ಟಿ ನಿಂಜೂರು, ಹರೀಂದ್ರ ಹೆಗ್ಡೆ ಕೊರಂಗ್ರಪಾಡಿ ಉಪಸ್ಥಿತರಿದ್ದರು.