ಮಣಿಪಾಲ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಘಟನೆ ಮಣಿಪಾಲದ ಲೇಕ್ ವಿವ್ಯೂ ಬಳಿ ನಡೆದಿದೆ.
ಕಾಡಬೆಟ್ಟು ನಿವಾಸಿ ಪ್ರಶಾಂತ್ ಎಂಬವರು ಡಿ.31 ರಂದು ಮಣಿಪಾಲ ಸಮೀಪದ ಪಬ್ ವೊಂದರಲ್ಲಿ ಇದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು, ಪಚ್ಚು ಎಂದರೆ ನೀನೆನಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಬ್ ನಿಂದ ಹೊರಗೆ ಬರುವಂತೆ ತಿಳಿಸಿದ್ದಾರೆ. ಅಲ್ಲಿಂದ ಹೊರಬಂದ ಪ್ರಶಾಂತ್ ಲೇಕ್ ವಿವ್ಯೂ ಕಡೆ ಹೋಗಿದ್ದು, ರತನ್ ಮತ್ತು ಇತರ ಇಬ್ಬರು ಹಿಂಬಾಲಿಸಿಕೊಂಡು ಬಂದು ಬೇಸ್ ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾರೆ. ಓರ್ವ ಆರೋಪಿ ಮುಖಕ್ಕೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾನೆ. ಜನ ಸೇರುತ್ತಿದ್ದಂತೆ ಆರೋಪಿಗಳು ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಮಲ್ಪೆಯ ಕೊಡವೂರು ನಿವಾಸಿ ರತನ್ ಪ್ರತಿದೂರು ನೀಡಿದ್ದಾರೆ. ಅದರಂತೆ ಡಿ.31 ರಾತ್ರಿ ರತನ್ ಅವರು ಹಣ ಪಡೆಯಲು ಪರಿಚಯದ ಲೋಯ್ಡ್ ಅವರಿಗೆ ಕರೆ ಮಾಡಿದ್ದು, ಆತನ ಬದಲು ಪ್ರಶಾಂತ್ ಎಂಬಾತ ಕರೆ ಸ್ವೀಕರಿಸಿ ಹಣ ಪಡೆದುಕೊಳ್ಳಲು ಪಬ್ ಬಳಿ ಬರಲು ತಿಳಿಸಿದ್ದನು. ಅದರಂತೆ ರತನ್ ಅವರು ಪಬ್ ಬಳಿ ಹೋಗಿದ್ದಾರೆ. ಆಗ ಪ್ರಶಾಂತ ಯಾನೆ ಪಚ್ಚು ಹಣ ಕೊಡಲು ಆಗುವುದಿಲ್ಲ ಏನೂ ಮಾಡಿಕೊಳ್ಳುತ್ತಿಯಾ ಮಾಡಿಕೋ ಎಂದು ಹೇಳಿ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣ ದಾಖಲಾಗಿದೆ.