ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇದರ ವತಿಯಿಂದ ಪ್ರಸ್ತಕ ಸಾಲಿನಲ್ಲಿ 5 ಲಕ್ಷ ರೂ. ಮೊತ್ತದ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಗಿದೆ. ವರ್ಷದ ಕೊನೆಯಲ್ಲಿ ಇದು 10 ಲಕ್ಷಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ಕೆ. ರಮೇಶ್ ಶೆಟ್ಟಿ ತಿಳಿಸಿದ್ದಾರೆ.
ಅವರು ಜಿಲ್ಲಾ ಗವರ್ನರ್ ಡಾ.ಎಂ.ಕೆ. ಭಟ್ ಅವರು ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯಕ್ಕೆ ಭಾನುವಾರ ಅಧಿಕೃತವಾಗಿ ಭೇಟಿ ನೀಡಿದ್ದು, ಈ ಸಂದರ್ಭ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹೊಸಬೆಳಕು ಪುನರ್ವಸತಿ ಕೇಂದ್ರದ ನೂರಕ್ಕೂ ಅಧಿಕ ನಿವಾಸಿಗಳಿಗೆ 30 ಸಾವಿರ ರೂ. ವೆಚ್ಚದಲ್ಲಿ ಊಟ, ಅಜ್ಜರಕಾಡು ಜಿ. ಶಂಕರ್ ಮಹಿಳಾ ಕಾಲೇಜಿಗೆ ಹತ್ತು ಸಾವಿರ ವೆಚ್ಚದ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಯಂತ್ರ, ವಳಕಾಡು ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಸೌರ ವಿದ್ಯುದ್ದೀಪದ ಕೊಡುಗೆ, ಪಾಶ್ವವಾಯು ಪೀಡಿತರೊಬ್ಬರಿಗೆ ಗಾಲಿಕುರ್ಚಿ ಸಹಿತ ಹತ್ತಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಹಾಕಿಕೊಂಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗವರ್ನರ್ ಡಾ.ಎಂ.ಕೆ. ಭಟ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಕಾರ್ಯದರ್ಶಿ ಕವನ ರವಿರಾಜ, ಉಪಾಧ್ಯಕ್ಷೆ ತಾರಾ ಆಚಾರ್ಯ, ಕೋಶಾಧಿಕಾರಿ ದೀಕ್ಷಿತಾ ಕೋಟ್ಯಾನ್ ಉಪಸ್ಥಿತರಿದ್ದರು.