ಕುಂದಾಪುರ: ಸಾಮಾನ್ಯ ಕಾರ್ಯಕರ್ತ ಗುರುರಾಜ ಗಂಟಿಹೊಳೆ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, 25 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಅವರು ಜಯವನ್ನು ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣೆ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು.
ಸೋಮವಾರ ತ್ರಾಸಿಯಿಂದ ಬೈಂದೂರು ತನಕ ಬೃಹತ್ ರೋಡ್ ಶೋ ನಡೆಸಿ,ಅನಂತರ ಮಾತನಾಡಿದ ಅವರು ಪಕ್ಷವೇ ಸಾಮಾನ್ಯ ಕಾರ್ಯಕರ್ತನ್ನು ಗುರುತಿಸಿ ಅವಕಾಶ ನೀಡಿದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ ಮತ್ತು ಅವರ ಅಭಿವೃದ್ಧಿಯ ಕನಸುಗಳು ಇವೆ. ನಾವೆಲ್ಲರೂ ಒಟ್ಟಾಗಿ ಗುರುರಾಜ್ ಗಂಟಿಹೊಳೆ ಅವರನ್ನು ಗೆಲ್ಲಿಸೊಣ ಎಂದು ಕರೆ ನೀಡಿದರು.
ಕ್ಷೇತ್ರದಲ್ಲಿ ಬಡವ,ಶ್ರೀಮಂತ, ಶ್ರಮೀಕರು,ರೈತರು, ಕಾರ್ಮಿಕರು ಹೀಗೆ ಸಾಮಾನ್ಯರಿಂದ ಹಿಡಿದು ಎಲ್ಲರ ಬೆಂಬಲ ಗುರುರಾಜ್ ಗಂಟಿಹೊಳೆಯವರ ಮೇಲಿದೆ.
ಬಿಜೆಪಿ ಪಕ್ಷ ಸಾಮಾನ್ಯರಿಗೂ ಸ್ಥಾನಮಾನ ನೀಡುತ್ತದೆ ಎಂಬುದಕ್ಕೆ ಗುರುರಾಜ ಗಂಟಿಹೊಳೆ ನಿದರ್ಶನವಾಗಿದೆ. ಬದಲಾವಣೆಗಾಗಿ ಈ ಅಭ್ಯರ್ಥಿಯ ಆಯ್ಕೆ ಮಾಡಲಾಗಿದೆ.ದೇಶ ಮೊದಲು ಎಂಬ ತತ್ವದಡಿ ಸಂಘಟನೆಯ ಕೆಲಸ ಮಾಡಿದವರು,ಕಳೆದ 15 ವರ್ಷದಿಂದ ಪಕ್ಷದ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ.
ಮನುಷ್ಯ ಅಹಂ ಇಲ್ಲದೇ ಸಮಾಜಕ್ಕಾಗಿ ಕೆಲಸ ಮಾಡಿದಾಗ ದೇವರಾಗುತ್ತಾನೆ ಎಂದು ಉಪನಿಷತ್ ಹೇಳುತ್ತದೆ. ಆ ರೀತಿಯ ನಾಯಕರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಅದೇ ಮಾದರಿಯಲ್ಲಿ ಗುರುರಾಜ ಗಂಟಿಹೊಳೆಯವರು ಬೆಳೆಯಲಿದ್ದಾರೆ. ಇದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯೂ ಆಗಲಿದೆ. ರಾಜ್ಯದಲ್ಲಿ ಬಿಜೆಪಿ 130 ಹೆಚ್ಚು ಸೀಟುಗಳೊಂದಿಗೆ ಸ್ಪಷ್ಟ ಬಹುಮತ ಪಡೆದು ಸರಕಾರ ರಚನೆ ಮಾಡಲಿದೆ ಎಂದರು.
ಬಿ.ಎಂ ಸುಕುಮಾರ್ ಶೆಟ್ಟಿಯವರ ಅವಧಿಯಲ್ಲಿ ಕಳೆದ 5 ವರ್ಷದಲ್ಲಿ 3 ಸಾವಿರ ಕೋಟಿಗೂ ಅಧಿಕ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ.ನಮ್ಮ ಪಕ್ಷದಲ್ಲಿ ಹೊಸಬರಿಗೆ ಅವಕಾಶ ನೀಡುತ್ತಿರುತ್ತಾರೆ. ಆದರೆ, ಕಾಂಗ್ರೆಸ್ ನಿಂದ 7 ಬಾರಿ ಸ್ಪರ್ಧಿಸಿ, ನಾಲ್ಕು ಬಾರಿ ಶಾಸಕರಾಗಿ 8 ನೇ ಬಾರಿ ಸ್ಪರ್ಧೆಗೆ ಇಳಿದು ಕೊನೆಯ ಅವಕಾಶ ನೀಡಿ ಎನ್ನುತ್ತಿದ್ದಾರೆ. ಇದು ಕೊನೆ ಚುನಾವಣೆ ಗೆಲ್ಲಿಸಿ ಎಂಬುದು ಕಾಂಗ್ರೆಸ್ ವ್ಯಾದಿಯದು ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಚುನಾವಣಾ ಪ್ರಭಾರಿ ಬ್ರಿಜೇಶ್ ಚೌಟ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶೈನ್ ಶೆಟ್ಟಿ, ಸಹಿತವಾಗಿ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.